ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮರುವಸತಿಗಾಗಿ ನೀಡಿದ ಜಮೀನಿನ ದಾಖಲೆಗಳನ್ನು ಬದಲಾವಣೆ ಮಾಡದಿರುವ ಬಗ್ಗೆ ಶುಕ್ರವಾರ ಮುಳುಗಡೆ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಈ ಹಿಂದೆ ಸರ್ಕಾರವು 1959ರಿಂದ 69ರವರೆಗೆ ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪಿಸಿದೆ. ಈ ಮಹತ್ವದ ಯೋಜನೆಗೆ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದು, ಈ ಸ್ಥಳದಲ್ಲಿ ವಾಸಿಸುತ್ತಿದ್ದ ರೈತರು, ಗೇಣಿದಾರರು, ಕುಲಕಸುಬು ಮಾಡುತ್ತಿದ್ದ ಕುಟುಂಬಗಳು ತಾವು ಸ್ವಾಧೀನವಿದ್ದ ಮನೆ, ಜಮೀನುಗಳನ್ನು ಹಾಗೂ ಇತರ ಸ್ವತ್ತುಗಳನ್ನು ಸರ್ಕಾರ ಭೂ ಸ್ವಾಧೀನ ಪಡಿಸಿಕೊಂಡಿದ್ದರಿಂದ ಸುಮಾರು 7 ಸಾವಿರಕ್ಕಿಂತ ಹೆಚ್ಚಿನ ಕುಟುಂಬಗಳು ನಿರಾಶ್ರಿತರಾಗಿದ್ದವು ಎಂದು ಮನವಿಯಲ್ಲಿ ತಿಳಿಸಿದರು.
ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲು ಅರಣ್ಯ ಇಲಾಖೆ ಹೆಸರಿನಲ್ಲಿರುವ ಸಾಕಷ್ಟು ಜಮೀನನ್ನು ಅಂದಿನ ಕಾನೂನಿನನ್ವಯ ಸಾಕಷ್ಟು ನಡುವಳಿ ಮೂಲಕ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಇದುವರೆಗೂ ನಿರಾಶ್ರಿತರ ಹೆಸರಿಗೆ ಈ ಜಮೀನಿನ ದಾಖಲೆಗಳನ್ನು ಮಾಡಿಕೊಟ್ಟಿಲ್ಲ ಎಂದು ದೂರಿದರು.
ಈಗಾಗಲೇ ಕಂದಾಯ ಇಲಾಖೆಗೆ ಹಸ್ತಾಂತರವಾಗಿ ಸಂತ್ರಸ್ತರಿಗೆ ವಿತರಿಸಿರುವ ಜಮೀನಿನ ಯಾವುದೇ ದಾಖಲೆ ಬದಲಾವಣೆ ಮಾಡದಂತೆ ಯಥಾ ಸ್ಥಿತಿ ಕಾಪಾಡಿಕೊಂಡು ಹೋಗಬೇಕು. ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ಪ್ರಕ್ರಿಯೆ ಶೀಘ್ರ ಮಾಡಬೇಕು ಎಂದು ಸಂತ್ರಸ್ತ ರೈತರು ಮನವಿಯಲ್ಲಿ ತಿಳಿಸಿದ್ದಾರೆ.