ಶಿಕಾರಿಪುರ: ವೈದ್ಯರು ಮಗುವಿಗೆ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ಶನಿವಾರ ತಡರಾತ್ರಿ ನಾಗರಿಕರು ಹಾಗೂ ಪಾಲಕರು ದಿಢೀರ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಜೀನಳ್ಳಿ ಪ್ರಶಾಂತ್, ತಾಲ್ಲೂಕಿನ ಕೊರಲಹಳ್ಳಿ ಗ್ರಾಮದಿಂದ ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗುವನ್ನು ಪಾಲಕರು ಕರೆತಂದಿದ್ದರು. ಆದರೆ ಅಲ್ಲಿ ಮಕ್ಕಳ ತಜ್ಞರಿಲ್ಲದ ಕಾರಣ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಗೋಪಾಲ ಹರಿಗಿ ಬಳಿ ಕರೆದೊಯ್ದಾಗ ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ‘ನಾನು ಮಕ್ಕಳ ವೈದ್ಯನಲ್ಲ’ ಎಂದು ಹೇಳಿರುವ ಅವರು ಪಾಲಕರೊಂದಿಗೆ ಸೌಜನ್ಯದಿಂದ ವರ್ತಿಸಿಲ್ಲ. ‘ಮಗುವಿಗೆ ಚಿಕಿತ್ಸೆ ಯಾಕೆ ನೀಡಲಿಲ್ಲ’ ಎಂದು ಪ್ರಶ್ನಿಸಿದರೆದ ಪುರಸಭೆ ಸದಸ್ಯನಾದ ನನಗೂ ಉಡಾಫೆ ಉತ್ತರ ನೀಡಿದರು’ ಎಂದು ಆರೋಪಿಸಿದರು.
‘ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡದ ಕಾರಣ ಮಗುವನ್ನು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿದ್ದೇವೆ. ಚಿಕಿತ್ಸೆ ನೀಡದ ಈ ವೈದ್ಯರ ಮೇಲೆ ಲಂಚ ಪಡೆದ ಆರೋಪವಿದೆ. ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ ವೈದ್ಯರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಅವರನ್ನು ಪ್ರತಿಭಟನಕಾರರು ಒತ್ತಾಯಿಸಿದರು.
‘ಅಮಾನತು ಮಾಡುವ ಅಧಿಕಾರ ನನಗೆ ಇಲ್ಲ, ತನಿಖೆ ನಡೆಸಿ ಮೇಲಿನ ಅಧಿಕಾರಿಗೆ ಕಳುಹಿಸುತ್ತೇನೆ’ ಎಂದು ಅವರು ಉತ್ತರಿಸಿದರು. ಆದರೆ ಈ ಮಾತಿಗೆ ಒಪ್ಪದ ಪ್ರತಿಭಟನಕಾರರು ಪ್ರತಿಭಟನೆ ಮುಂದುವರೆಸಿದರು. ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬರುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಆಗಮಿಸಿ ಪ್ರತಿಭಟನಕಾರರ ಆರೋಪ ಆಲಿಸಿದರು. ವೈದ್ಯರನ್ನು ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಆಡ್ನೋರ್ ಮಂಜಪ್ಪ, ಪೋಷಕ ಯೋಗರಾಜ್, ಎಸ್.ಎಸ್. ರಾಘವೇಂದ್ರ, ಗೋಣಿ ಮಾಲು, ವೀರನಗೌಡ, ರಾಘು, ನಂಜುಡಿ, ಮಲ್ಲೇಶ್, ಎಲೆ ಸತೀಶ್, ರಾಕೇಶ್, ಕಿರಣ್, ಕುಮಾರ ಉಪಸ್ಥಿತರಿದ್ದರು.