ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಸಮಿತಿ ಸದಸ್ಯರ ಸಭೆ ಕರೆದು ಲೆಕ್ಕಪತ್ರ ಮಂಡಿಸುವಂತೆ ಒತ್ತಾಯಿಸಿ ಮಾರಿಕಾಂಬಾ ಹಿತರಕ್ಷಣಾ ಸಮಿತಿ ಪ್ರಮುಖರು ಗುರುವಾರ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
ದೇವಸ್ಥಾನದ ಹಾಲಿ ವ್ಯವಸ್ಥಾಪಕ ಸಮಿತಿ ಮೂರು ಮಾರಿಕಾಂಬಾ ಜಾತ್ರೆಯ ಲೆಕ್ಕಪತ್ರಗಳನ್ನು ನೀಡಿಲ್ಲ. ಸಕಾಲದಲ್ಲಿ ಸರ್ವ ಸದಸ್ಯರ ಸಭೆ ಕರೆದಿಲ್ಲ. ಸಮಿತಿಯ ಪದಾಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಆದಾಯವಿದೆ. ಹೀಗಿರುವಾಗ ಸಕಾಲದಲ್ಲಿ ಲೆಕ್ಕಪತ್ರಗಳನ್ನು ಒದಗಿಸುವುದು ಸಮಿತಿಯ ಜವಾಬ್ದಾರಿ. ಈ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಮಿತಿ ವಿಫಲವಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ಸರ್ವ ಸದಸ್ಯರ ಸಭೆಯನ್ನು ಕರೆದು ದೇವಸ್ಥಾನಕ್ಕೆ ನೂತನ ಸಮಿತಿ ರಚಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದರೂ ಒಂದಲ್ಲ ಒಂದು ನೆಪ ಹೇಳಿ ಹಾಲಿ ಸಮಿತಿಯವರು ಸಭೆ ಕರೆಯುವುದನ್ನೇ ಮುಂದಕ್ಕೆ ಹಾಕುತ್ತಿದ್ದಾರೆ. ಇದೇ ರೀತಿ ಆದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಪ್ರಮುಖರು ಸ್ಥಳಕ್ಕೆ ಬಂದು ಡಿ.31ರೊಳಗೆ ಸರ್ವ ಸದಸ್ಯರ ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಮಾರಿಕಾಂಬಾ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಎಂ.ಡಿ. ಆನಂದ, ವಿ.ಶಂಕರ್, ಡಿಶ್ ಗುರು, ಕೆ. ಸಿದ್ದಪ್ಪ, ಶೋಭಾ ಲಂಬೋದರ್, ನಿರ್ಮಲಾ ಗಣೇಶ್, ಶ್ರೀಧರ್, ಈಶ್ವರ್, ರಘುನಾಥ್, ಆಟೊ ದಿನೇಶ್, ನಿತ್ಯಾನಂದ ಶೆಟ್ಟಿ, ಗೋಪಾಲಕೃಷ್ಣ ಶ್ಯಾನಭಾಗ್, ಜನಾರ್ದನ್ ಆಚಾರಿ, ಸುದರ್ಶನ, ಗುರುಬಸಲಿಂಗಪ್ಪ ಇದ್ದರು.