ಶಿವಮೊಗ್ಗ: ಉತ್ತರ ಪ್ರದೇಶದಲ್ಲಿ ದೇವಾಲಯದ ಅರ್ಚಕ ಮತ್ತು ಸಹಚರರಿಂದಲೇ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಶುಕ್ರವಾರ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಭಾರತದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಲ್ಲಿನ ಸರ್ಕಾರ ಅತ್ಯಾಚಾರ ತಡೆಯುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಅರ್ಚಕ ಮತ್ತು ಆತನ ಸಹಚರರು ಅತ್ಯಾಚಾರ ಎಸಗಿ ಮಹಿಳೆಯ ಹತ್ಯೆ ಮಾಡಿರುವುದು ಖಂಡನೀಯ. ಇದು ದೆಹಲಿಯ ನಿರ್ಭಯ ಪ್ರಕರಣಕ್ಕಿಂತ ಘೋರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಸರಣಿ ರೀತಿಯಲ್ಲಿ ಅತ್ಯಾಚಾರಗಳು ನಡೆಯುತ್ತಿವೆ. ಕುಲದೀಪ್ ಸಿಂಗ್ನಿಂದ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಇನ್ನು ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದಾಳೆ. ಹೈದರಾಬಾದ್ನ ಅತ್ಯಾಚಾರ ಪ್ರಕರಣ ಇನ್ನೂ ಮನಸ್ಸಿನಿಂದ ಮಾಸಿಲ್ಲ. ದೇಶದಲ್ಲಿ ಅತ್ಯಾಚಾರಿಗಳು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.
ಸಂಘಟನೆಗಳ ಮುಖಂಡರಾದ ಕೆ.ಎಲ್. ಅಶೋಕ್, ಟಿ.ಎಚ್. ಹಾಲೇಶಪ್ಪ, ಅನಿಲ್ ಕುಮಾರ್, ಡಿ.ಎಸ್. ಶಿವಕುಮಾರ್, ಆರ್. ಕುಮಾರ್, ಖಾಸಿಂ, ಕೆ. ರಾಘವೇಂದ್ರ, ಸಿ. ಚಂದ್ರಪ್ಪ, ರಾಮಚಂದ್ರಪ್ಪ, ರೇಖಾಂಬ, ಮಲ್ಲಿಕಾರ್ಜುನ, ಅಜಿತ್, ಕೃಷ್ಣಮೂರ್ತಿ ಪುರದಾಳ್ ಇದ್ದರು.