ಶಿಕಾರಿಪುರ: ಮೆಕ್ಕೆಜೋಳ ಬೆಳೆಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.
‘ತಾಲ್ಲೂಕಿನಲ್ಲಿ ಒಂದು ತಿಂಗಳ ಹಿಂದೆ ಸುರಿದ ಜಿಟಿ ಜಿಟಿ ಮಳೆಯಲ್ಲಿ ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ, ಪ್ರಸ್ತುತ ಕೆಲ ದಿನಗಳಿಂದ ಸುರಿದ ಮಳೆ ಪರಿಣಾಮ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಕೃಷಿ ಭೂಮಿ ಜೌಗು ಪ್ರದೇಶವಾದ ಕಾರಣ ಮೆಕ್ಕೆಜೋಳ ಇಳುವರಿ ಬರುವುದಿಲ್ಲ ಹಾಗೂ ಬೆಳೆ ನಾಶವಾಗುತ್ತದೆ. ಆದ್ದರಿಂದ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಗೌರವಾಧ್ಯಕ್ಷ ಪ್ಯಾಟೆ ಈರಪ್ಪ, ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಪುಟ್ಟನಗೌಡ, ಉಪಾಧ್ಯಕ್ಷ ಕೊಟ್ರೇಶ್, ಕಾರ್ಯದರ್ಶಿ ರಾಜು, ಮುನಾಫ್, ರಾಜಣ್ಣ, ವೀರೇಶ್ ಉಪಸ್ಥಿತರಿದ್ದರು.