ಶಿವಮೊಗ್ಗ: ಯುಗಾದಿ ಹಬ್ಬದ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಹಬ್ಬದ ಖರೀದಿ ಜೋರಾಗಿದೆ. ನಗರದ ಮಾರುಕಟ್ಟೆಗಳಲ್ಲಿ ಯುಗಾದಿ ಖರೀದಿ ಭರದಿಂದ ಸಾಗುತ್ತಿದೆ.
ಈ ಬಾರಿ ಯುಗಾದಿ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಿದ್ದು, ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಬೆಲೆ ಏರಿಕೆಯ ಬಿಸಿ ನಡುವೆ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಡುಗೆ ಎಣ್ಣೆ ಒಂದು ಲೀಟರ್ಗೆ ₹ 200 ದಾಟಿದೆ. ದೀಪದ ಎಣ್ಣೆಯೂ ಲೀಟರ್ಗೆ ₹ 200ಕ್ಕಿಂತ ಹೆಚ್ಚಾಗಿದೆ.
ಇನ್ನು ಬೇಳೆ, ಬೆಲ್ಲ, ಮೈದಾಹಿಟ್ಟು ಸೇರಿ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕೂಡ ಏರಿಕೆಯಾಗಿತ್ತು. ಒಂದು ಮಾರು ಸೇವಂತಿಗೆಗೆ₹ 100 ದರ ಇತ್ತು. ತರಕಾರಿಗಳ ಬೆಲೆ ಕೂಡ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ನಡುವೆಯೂ ಹಬ್ಬದ ಸಿದ್ಧತೆ ಮಾತ್ರ ಜೋರಾಗಿಯೇನಡೆಯುತ್ತಿದೆ.
ಮಾರುಕಟ್ಟೆಯಲ್ಲಿ ಶುಕ್ರವಾರ ಜನಜಂಗುಳಿ ಕಂಡುಬಂತು. ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊಸ ಬಟ್ಟೆ ಖರೀದಿ, ದಿನಸಿ, ಮಾವಿನ ಸೊಪ್ಪು, ಬೇವಿನ ಹೂವು ಮತ್ತು ಸೊಪ್ಪು, ಹೂವು, ಹಣ್ಣು ಹಂಪಲು ಖರೀದಿಯಲ್ಲಿ ಜನರು ತೊಡಗಿದ್ದರು.
ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ನೆಹರೂ ರಸ್ತೆ, ಬಿ.ಎಚ್. ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸವಳಂಗ ರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಇತ್ತು. ಅಂಗಡಿಗಳಲ್ಲೂ ವ್ಯಾಪಾರ ಜೋರಾಗಿತ್ತು. ಪ್ರಮುಖ ವೃತ್ತಗಳಲ್ಲಿ ಮಾವು, ಕಹಿಬೇವು, ಬಾಳೆ ಕಂದು, ಹಣ್ಣು ಖರೀದಿನಡೆಯಿತು.
ಹಬ್ಬಕ್ಕೆ ಹೊರ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಶಿವಮೊಗ್ಗಕ್ಕೆ ಬರುವ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.