ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಬುಧವಾರವೂ ಮಳೆ ಆರ್ಭಟ ಮುಂದುವರಿದಿದೆ.
ಕೆಲವು ತಾಲ್ಲೂಕುಗಳಲ್ಲಿ ರಾತ್ರಿ ಇಡೀ ಮಳೆಯಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಒಂದೇ ದಿನ 483 ಮಿ.ಮೀ ಮಳೆಯಾಗಿದೆ. ಜಲಾಶಯಗಳ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತುಂಗಾ ಜಲಾಶಯಕ್ಕೆ 55,774 ಕ್ಯುಸೆಕ್, ಭದ್ರಾಗೆ 22,203 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ತುಂಗಾ ಜಲಾಶಯದಿಂದ 59 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ. ಶಿವಮೊಗ್ಗ ನಗರದ ಕೋರ್ಪಲ್ಲಯ್ಯನ ಛತ್ರದ ಮಂಟಪ ಮುಳುಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಜನರು ತಂಡೋಪತಂಡವಾಗಿ ಬಂದು ತುಂಬಿದ ನದಿ ವೀಕ್ಷಿಸಿದರು. ಕೆಲವರು ಪೂಜೆ ಸಲ್ಲಿಸಿದರು.