ಹೊಳೆಹೊನ್ನೂರು: ದೇಶದಾದ್ಯಂತ ಸಿಬಿಎಸ್ಇ ಶಾಲೆಗಳ ವೀರ್ಗಾಥಾ ಸ್ಪರ್ಧೆಯಲ್ಲಿ ಸೂಪರ್ 25 ಮಕ್ಕಳ ಪಟ್ಟಿಯಲ್ಲಿ ಒಬ್ಬರಾಗಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಅಮೃತಾ ಎಸ್. ಆಯ್ಕೆಯಾಗಿದ್ದು, ಗಣರಾಜ್ಯೋತ್ಸವದ ಪ್ರಮುಖ ಅತಿಥಿ ಗೌರವ ಪಡೆಯಲಿದ್ದಾರೆ.
‘ಗ್ಯಾಲೆಂಟ್ರಿ ಅವಾರ್ಡ್’ ಪ್ರಶಸ್ತಿ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಕೇಂದ್ರ ರಕ್ಷಣಾ ಇಲಾಖೆಯು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವೀರರ ಸಾಧನೆ ಕುರಿತ ಕವನ ರಚನೆ, ಲೇಖನ ಬರಹ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿತ್ತು.
ಅಮೃತಾ ಎಸ್. 9-10ನೇ ತರಗತಿ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿ ರಕ್ಷಣಾ ಇಲಾಖೆಯು ನೀಡುವ ₹10 ಸಾವಿರ ನಗದು ಬಹುಮಾನದ ಜೊತೆಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಐಪಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ. ಹೆಗಡೆ ಅಭಿನಂದಿಸಿದ್ದಾರೆ.