ಸಾಗರ: ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಕಂಪ್ಯಾಷನ್ ಇಂಡಿಯಾ ಟ್ರಸ್ಟ್ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಗಾಲಿ ಕುರ್ಚಿ, ರೇಷನ್ ಕಿಟ್, ವಾಕರ್, ಊರುಗೋಲು ಕೇನ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಹಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಸಂಘ ಸಂಸ್ಥೆಗಳು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಸಂಕಷ್ಟದಲ್ಲಿರುವವರಿಗೆ ಕೈಲಾದ ನೆರವು ನೀಡುವ ಮೂಲಕ ಸ್ಪಂದಿಸುವುದು ಮಾನವೀಯತೆ ನಮ್ಮಲ್ಲಿ ಇನ್ನೂ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ನೂರು ಅಂಗವಿಕಲರ ನೆರವಿಗೆ ಧಾವಿಸಿರುವ ಕಂಪ್ಯಾಷನ್ ಇಂಡಿಯಾ ಸಂಸ್ಥೆಯ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗುವಂತಿದೆ’ ಎಂದು ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
ಕಂಪ್ಯಾಷನ್ ಟ್ರಸ್ಟ್ ಅಧ್ಯಕ್ಷ ರಾಬರ್ಟ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಧರ್ಮೇಂದ್ರ ಶಿರವಾಳ, ಶ್ಯಾಮಸುಂದರ, ವಿಲ್ಸನ್ ಗೋಮ್ಸ್, ಅಬ್ದುಲ್ಲಾ, ಆರ್ಥರ್ ಗೋಮ್ಸ್, ಜಾನ್ ಲೋಪಿಸ್, ಜಾನ್ ಡಿಸೋಜ, ಜೋಸೆಫ್ ರೋಡ್ರಿಗಸ್, ಫ್ರಾನ್ಸಿಸ್ ಮಿರಾಂಡ ಇದ್ದರು.