ಹೊಳೆಹೊನ್ನೂರು: ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಪರಂಪರೆಯ ಪ್ರಖ್ಯಾತ ಯತಿ ಶ್ರೀ ಸತ್ಯಧರ್ಮ ತೀರ್ಥರ 188ನೇ ಆರಾಧನೋತ್ಸವ ಇದೇ 5ರಿಂದ 8ರವರೆಗೆ ಹೊಳೆಹೊನ್ನೂರಿನ ಮೂಲ ವೃಂದಾವನ ಕ್ಷೇತ್ರದಲ್ಲಿ ನಡೆಯಲಿದೆ.
1797ರಿಂದ 1830ರವರೆಗೆ ಹಂಸ ನಾಮಕ ಪೀಠದಲ್ಲಿ ವಿರಾಜಮಾನರಾಗಿದ್ದು, ಸಂಸ್ಥಾನ ಪ್ರತಿಮಾ ಶ್ರೀ ಮೂಲ ಸೀತಾ ರಾಮದೇವರನ್ನು ಆರಾಧಿಸಿದ ಸತ್ಯಧರ್ಮ ತೀರ್ಥರು, ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳಿಗೆ ಪ್ರೌಢ ವ್ಯಾಖ್ಯಾನ ಕೃತಿಗಳನ್ನು ರಚಿಸಿದ್ದಾರೆ.
5ರಂದು ಪೂರ್ವಾರಾಧನೆ ನಿಮಿತ್ತ ವೃಂದಾವನಕ್ಕೆ ವಿಶೇಷ ಅಭಿಷೇಕ, ಪಂಚಾಮೃತ, ಅಲಂಕಾರ, ಸಂಜೆ 4ಕ್ಕೆ ಪಂಡಿತರಿಂದ ಪ್ರವಚನ, ಪ್ರಾಕಾರದಲ್ಲಿ ರಥೋತ್ಸವ ನಡೆಯಲಿದೆ.
6ರಂದು ಏಕಾದಶಿ ಅಂಗವಾಗಿ 10 ವಿದ್ವಾಂಸರಿಂದ ಭಾವ ಸಹಿತವಾಗಿ ಭಾಗವತ ದಶಮಸ್ಕಂದ ಪ್ರವಚನ ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ನಡೆಯಲಿದೆ. ರಾತ್ರಿ 8ರಿಂದ ಅನಿರುದ್ಧ ಮತ್ತು ತಂಡದಿಂದ ದಾಸವಾಣಿಯಿಯೊಂದಿಗೆ ಜಾಗರಣೆ ನಡೆಯಲಿದೆ. 7ರಂದು ಮಧ್ಯಾರಾಧನೆ ಅಂಗವಾಗಿ ವಾಯುಸ್ತುತಿ ಪುನಶ್ಚರಣ, ಸಾಮೂಹಿಕ ಲಕ್ಷ್ಮೀ ಶೋಭಾನೆ, ಮಧ್ಯಾಹ್ನ ರಸಪ್ರಶ್ನೆ (ಜಗನ್ನಾಥದಾಸರ ತತ್ವ ಸುವಾಲಿ ಕೃತಿ ಆಧಾರಿತ), ನಂತರ ಮೈಸೂರು ರಾಮಚಂದ್ರಾಚಾರ್ಯರಿಂದ ದಾಸವಾಣಿ ನಡೆಯಲಿದೆ.
ಉತ್ತರ ಆರಾಧನೆ ಅಂಗವಾಗಿ 8ರಂದು ಬೆಳಿಗ್ಗೆ ಮನ್ಯುಸೂಕ್ತ ಮಹಾ ಹೋಮ, ನರಸಿಂಹ ಸುಳಾದಿ ಪಾರಾಯಣ, 11ಕ್ಕೆ ಮಹಾರಥೋತ್ಸವ, ರಾಜಬೀದಿ ಉತ್ಸವ, ತೀರ್ಥಪ್ರಸಾದ ವಿತರಣೆ ಇದೆ ಎಂದು ಪ್ರಧಾನ ಅರ್ಚಕ ನವರತ್ನ ಸುಬ್ಬಣ್ಣಾಚಾರ್ಯರು ತಿಳಿಸಿದ್ದಾರೆ. ಮಾಹಿತಿಗೆ ಮೊಬೈಲ್ 9900601608 ಸಂಖ್ಯೆಯನ್ನು ಸಂಪರ್ಕಿಸಬಹುದು.