ಶಿಕಾರಿಪುರ: ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.
ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಈಚೆಗೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ. ಒಂದು ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಪ್ರಾಮಾಣಿಕ ಕೈಗಳ ಅವಶ್ಯಕತೆ ಇದೆ. ಮನುಷ್ಯ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸಂಸದನಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಆ.11ರಿಂದ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ. ಹೊಸ ಉದ್ಯಮಗಳು ಜಿಲ್ಲೆಗೆ ಬರಲು ವಿಮಾನ ಹಾರಾಟ ಸಹಕಾರಿಯಾಗಲಿದೆ ಎಂದರು.
ಶಾಸಕ ಬಿ.ವೈ. ವಿಜಯೇಂದ್ರ, ಗುರುವಿಗೆ ಪವಿತ್ರ ಸ್ಥಾನ ಕೊಟ್ಟ ದೇಶ ನಮ್ಮದು. ಗುರುಗಳಿಗೆ ಗೌರವ ನೀಡಿದಾಗ ಉನ್ನತ ಮಟ್ಟಕ್ಕೆ ವಿದ್ಯಾರ್ಥಿಗಳು ಬೆಳೆಯಲು ಸಾಧ್ಯವಾಗುತ್ತದೆ. ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಆಗಿದೆ. ಸಮಾಜಮುಖಿ ಕೆಲಸ ಮಾಡಲು ರಾಜಕೀಯ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಿಮ್ಮ ಸಲಹೆ ಸಹಕಾರ ನನಗೆ ಇರಬೇಕು. ಶಾಸಕನಾಗಿ ಆಯ್ಕೆಯಾದ ನಂತರ ನಾನು ಓದಿದ ಶಾಲೆಯಲ್ಲಿ ಅಭಿನಂದನೆ ಸ್ವೀಕರಿಸುತ್ತಿರುವುದು ಸಂತಸ ತಂದಿದೆ ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಲಯನ್ಸ್ ಕ್ಲಬ್ ಡಿಸ್ಟಿಕ್ ಗೌರ್ನರ್ ಡಾ. ಎಂ.ಕೆ. ಭಟ್, ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಾಲೇಶ್ವರ ಎಂ. ಕರಿಬಸಪ್ಪ, ಉಪಾಧ್ಯಕ್ಷ ಮೋಹನ್ ಸಾನು, ಕಾರ್ಯದರ್ಶಿ ಶಿವಾನಂದಸಾನು, ಜಂಟಿ ಕಾರ್ಯದರ್ಶಿ ಸಂದೀಪ್, ಖಜಾಂಚಿ ಜಿ.ಎಂ. ಅನಿಲ್ ಪ್ರಸಾದ್, ಮಮತಾ ಬಾಲಚಂದ್ರ, ಶಿಕಾರಿಪುರ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರಸಾನು, ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಮಮತಾ ಬಾಲಚಂದ್ರ, ಕಾರ್ಯದರ್ಶಿ ಎಚ್. ಬಾಲಚಂದ್ರ, ಖಜಾಂಚಿ ದೂದಿಹಳ್ಳಿ ಪ್ರವೀಣ್, ನಿರ್ದೇಶಕರಾದ ಗದಿಗೆಪ್ಪ, ಗಣೇಶಪ್ಪ, ಓಂಕಾರಶಾಸ್ತ್ರಿ, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಾನಂದಶಾಸ್ತ್ರಿ, ಕಾರ್ಯದರ್ಶಿ ಡಿ.ಕೆ. ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.