ಶಿಕಾರಿಪುರ:ದಿಂಡಿ ಉತ್ಸವ ಪ್ರಯುಕ್ತ ವಿಠ್ಠಲ ರುಖುಮಾಯಿ ದೇವರ ರಥೋತ್ಸವ ಮೆರವಣಿಗೆಯು ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ದೊಡ್ಡಪೇಟೆ ವಿಠ್ಠಲ ರುಖುಮಾಯಿ ಮಂದಿರದಿಂದ ವೀಣಾ,ತಾಳ,ಮೃದಂಗ,ಬಾಳಗೋಪಾಳ ಸೇರಿದಂತೆ ವಿವಿಧ ಕಲಾಮೇಳಗಳೊಂದಿಗೆ ವಿಠ್ಠಲ ರುಖುಮಾಯಿ ದೇವರ ರಥೋತ್ಸವ ಮೆರವಣಿಗೆ ದೊಡ್ಡಪೇಟೆ,ಮಂಡಿಪೇಟೆ,ಹರಳೆಣ್ಣೆ ಕೇರಿ ಸೇರಿದಂತೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು.
ನಾಮದೇವ ಸಿಂಪಿ ಸಮಾಜ ಬಾಂಧವರು ರಥೋತ್ಸವ ಮೆರವಣಿಗೆ ತಮ್ಮ ಮನೆ ಮುಂಭಾಗ ಆಗಮಿಸಿದಾಗ ವಿಠ್ಠಲ ರುಖುಮಾಯಿ ದೇವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ರಥೋತ್ಸವ ಮೆರವಣಿಗೆಯಲ್ಲಿ ಕೋಲಾಟ ಪ್ರದರ್ಶಿಸಿದರೆ,ಭಜನಾ ಮಂಡಳಿ ಸದಸ್ಯರು ದೇವರ ಭಕ್ತಿಗೀತೆಗಳನ್ನು ಹಾಡುತ್ತಾ ಹೆಜ್ಜೆ ಹಾಕಿದರು. ನಾಮದೇವ ಸಿಂಪಿ ಸಮಾಜ ಮುಖಂಡರು,ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ನಂತರ ವಿಠ್ಠಲ ರುಖುಮಾಯಿ ಮಂದಿರದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದಿಂಡಿ ಉತ್ಸವ ಹಿನ್ನೆಲೆ ಪಟ್ಟಣದ ವಿಠ್ಠಲ ರುಖುಮಾಯಿ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜ, ಸಂತ ನಾಮದೇವ ಭಜನಾ ಮಂಡಳಿ, ಸಂತ ನಾಮದೇವ ಯುವಕ ಸಂಘ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆದವು.