ಶಿವಮೊಗ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ನಂತರ ಮೊದಲ ಬಾರಿಗೆ ತವರು ಜಿಲ್ಲೆಗೆ ಬಂದ ಮಧು ಬಂಗಾರಪ್ಪ ಅವರಿಗೆ ಶನಿವಾರ ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭರ್ಜರಿ ಸ್ವಾಗತ ನೀಡಲಾಯಿತು.
ಶಿವಮೊಗ್ಗದ ಹೊರವಲಯದ ಮಲವಗೊಪ್ಪಕ್ಕೆ ಭದ್ರಾವತಿಯಿಂದ ಬಂದ ಮಧು ಬಂಗಾರಪ್ಪ ಅಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಶಿವಮೊಗ್ಗ ನಗರಕ್ಕೆ ಬರುತ್ತಿದ್ದಂತೆಯೇ ಎಂ ಆರ್ ಎಸ್ ವೃತ್ತದ ಬಳಿ ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಅನಾನಸ್ ಹಣ್ಣಿನ ಹಾರ ಹಾಕಿ ಸ್ವಾಗತಿಸಿದರು.
ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಮಧು ಬಂಗಾರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ನಂತರ ವಿದ್ಯಾನಗರದ ಚೌಡಮ್ಮ ಗುಡಿಯ ಬಳಿ ಮಹಿಳೆಯರು ಸಚಿವರಿಗೆ ಪೂರ್ಣಕುಂಭದ ಸ್ವಾಗತ ನೀಡಿದರು. ಕ್ರೇನ್ ಮೂಲಕ ಹೂವಿನ ಹಾರಿ ಹಾಕಿ ಸ್ವಾಗತ ಕೋರಲಾಯಿತು. ಹೊಳೆ ಬಸ್ ನಿಲ್ದಾಣದ ಬಳಿಯೂ ಹೂವಿನ ಹಾರ ಹಾಕಿ ಸ್ವಾಗತಿಸಿ ಅಲ್ಲಿಂದ ಸಾಗರ ರಸ್ತೆಯ ಲಗ್ನ ಮಂದಿರಕ್ಕೆ ಕರೆತಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.