ಶಿವಮೊಗ್ಗ: ನಾಲ್ಕು ದಶಕಗಳಿಂದ ಶಿವಮೊಗ್ಗದ ಸಿನಿ ಪ್ರಿಯರ ನೆಚ್ಚಿನ ತಾಣ, ಇಲ್ಲಿನ ಜೈಲು ರಸ್ತೆಯ ಲಕ್ಷ್ಮೀ ಚಿತ್ರಮಂದಿರ ಇನ್ನು ಇತಿಹಾಸದ ಭಾಗವಾಗಲಿದೆ.
928 ಆಸನಗಳ ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ಥಿಯೇಟರ್ ಎಂಬ ಹೆಗ್ಗಳಿಕೆ ಹೊಂದಿದ್ದ ಲಕ್ಷ್ಮೀ ಚಿತ್ರಮಂದಿರವನ್ನು ಶಿವಮೊಗ್ಗದ ಗುತ್ತಿಗೆದಾರ ದಿವಂಗತ ಡಿ.ಲಕ್ಕಪ್ಪ 1984ರಲ್ಲಿ ಕಟ್ಟಿಸಿದ್ದರು. ಡಾ.ರಾಜಕುಮಾರ್ ಅವರ ಶ್ರೀನಿವಾಸ ಕಲ್ಯಾಣ ಇಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾ.
ಈ ಥಿಯೇಟರ್ಗೆ ವಿಷ್ಣುವರ್ಧನ್, ಅಂಬರೀಶ್ ಹಾಗೂ ಟೈಗರ್ ಪ್ರಭಾಕರ್ ಬಂದಿದ್ದರು. ಇದು ಆಗ ಮನೆಮಾತಾಗಿತ್ತು.
‘ಲಕ್ಷ್ಮೀ ಚಿತ್ರಮಂದಿರವನ್ನು ಬಂದ್ ಮಾಡಿ ಕಟ್ಟಡ ಕೆಡವುವ ಕಾರ್ಯ ಆರಂಭವಾಗಿದ್ದು, ಆ ಸ್ಥಳದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ತಲೆ ಎತ್ತಲಿದೆ. ಥಿಯೇಟರ್ ನೆನಪಿಗಾಗಿ ಮೇಲಿನ ಅಂತಸ್ತಿನಲ್ಲಿ ಶ್ರೀಲಕ್ಷ್ಮೀ ಹೆಸರಿನ ಪುಟ್ಟ ಮಲ್ಟಿಪ್ಲೆಕ್ಸ್ ಕಟ್ಟಲು ಯೋಚಿಸಿದ್ದೇವೆ’ ಎಂದು ಲಕ್ಕಪ್ಪ ಅವರ ಪುತ್ರ ಎಸ್.ಎಲ್. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಓಟಿಟಿ, ಹೋಂ ಥಿಯೇಟರ್ ಅಬ್ಬರದಲ್ಲಿ ಈಗ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಬರುತ್ತಿಲ್ಲ. ಈಗ ಮನರಂಜನೆ ಬಹಳ ಸುಲಭವಾಗಿ ಸಿಗುವ ಮಾಧ್ಯಮವಾಗಿ ಬದಲಾಗಿದೆ. ಕೋವಿಡ್ ನಂತರ ಸಿನಿಮಾ ಮಂದಿರಗಳಿಗೆ ಬಹಳ ಹೊಡೆತ ಬಿದ್ದಿದೆ. ಆಗೆಲ್ಲಾ ಥಿಯೇಟರ್ಗೆ ತೆರಳಿ ಸಿನಿಮಾ ನೋಡುವುದೇ ದೊಡ್ಡ ವಿಚಾರವಾಗಿತ್ತು. ಈಗ ಅಂಗೈನಲ್ಲಿಯೇ ಎಲ್ಲವೂ ಲಭ್ಯವಿದೆ. ಹೀಗಾಗಿ ಜನರು ಬರುತ್ತಿಲ್ಲ ಎಂದು ಹೇಳಿದರು.
ಈ ಥಿಯೇಟರ್ನಲ್ಲಿ ಕೋಟಿಗೊಬ್ಬ, ನೆನಪಿರಲಿ, ನಿನಗಾಗಿ, ಗಜ ಮೊದಲಾದ ಸಿನಿಮಾಗಳು ಶತದಿನ ಆಚರಿಸಿಕೊಂಡಿವೆ. ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೊನೆಯದಾಗಿ ಇಲ್ಲಿ ಪ್ರದರ್ಶನಗೊಂಡ ಕನ್ನಡ ಸಿನಿಮಾ.
’ಆಪ್ತಮಿತ್ರ’ 300 ದಿನ ಪ್ರದರ್ಶನ
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ಆಪ್ತಮಿತ್ರ‘ ಸಿನಿಮಾ ಲಕ್ಷ್ಮೀ ಚಿತ್ರಮಂದಿರದಲ್ಲಿ ಸತತ 300 ದಿನಗಳ ಕಾಲ ಓಡಿ ದಾಖಲೆ ಬರೆದಿದೆ. ವಿಜಯ ರಾಘವೇಂದ್ರ ಅವರ ‘ನಿನಗಾಗಿ‘ 25 ವಾರ ಪ್ರದರ್ಶನ ಕಂಡಿದೆ.