ಸಾಗರ: ‘ನನ್ನ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸುವುದನ್ನು ತಡೆಯಬೇಕು ಎಂದು ಕೆಲವು ಬಿಜೆಪಿ ಮುಖಂಡರು ಷಡ್ಯಂತ್ರ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಬಹುದು ಎಂಬ ಕಾರಣಕ್ಕೆ ಕೇವಿಯೆಟ್ ಅರ್ಜಿ ಸಲ್ಲಿಸಿದ್ದೇನೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಸುವ ಹಕ್ಕು ಇದೆ. ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.
ಬಿಜೆಪಿ ಮತ್ತು ನನಗೂ ತಾಯಿ ಮಗುವಿನ ಸಂಬಂಧವಿದ್ದಂತೆ. ಮಹತ್ವದ್ದನ್ನು ಸಾಧಿಸುವಾಗ ಕೆಲವೊಮ್ಮೆ ಅನಿವಾರ್ಯವಾಗಿ ದೀರ್ಘಕಾಲದ ಬಾಂಧವ್ಯವನ್ನು ಬಿಡಬೇಕಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೆಲುವು ಸಾಧಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೈ ಜೋಡಿಸುತ್ತೇನೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ, ಜಾತಿ, ಧರ್ಮ, ಪಂಗಡ, ಹಣವನ್ನು ಮೀರಿ ಎಲ್ಲಾ ವರ್ಗಗಳಿಂದ ದೊಡ್ಡ ಪ್ರಮಾಣದಲ್ಲಿ ನನಗೆ ಬೆಂಬಲ ವ್ಯಕ್ತವಾಗುತ್ತಿದೆ. ಇದು ಹಣ ಹಾಗೂ ಧರ್ಮದ ನಡುವೆ ನಡೆಯುತ್ತಿರುವ ಯುದ್ಧವಾಗಿದೆ. ಅಂತಿಮವಾಗಿ ಧರ್ಮಕ್ಕೆ ಜಯವಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಪ್ರಕಾಶ್ ಕುಂಠೆ, ನಗರಸಭೆ ಮಾಜಿ ಸದಸ್ಯ ಎಸ್.ಎಲ್.ಮಂಜುನಾಥ್, ಪ್ರಮುಖರಾದ ಸುರೇಶ್ ವಾಟಗೋಡು, ಸವಿತಾ ಗೋಪಾಲ್, ಅರುಣಾ ವಿನಾಯಕ, ಕಸ್ತೂರಿ ಸಾಗರ್, ಸತೀಶ್ ಗೌಡ ಅದರಂತೆ, ಉಮೇಶ್ ಚೌಟಗಿ, ಅಣ್ಣಪ್ಪ ಕಾರ್ಗಲ್, ನಾಗರಾಜ, ರಜನೀಶ್ ಹಕ್ರೆ ಇದ್ದರು.