ಶಿವಮೊಗ್ಗ: ಶಿವಮೊಗ್ಗ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ರೈತರ ಭೂಮಿಗೆ ಯೋಗ್ಯ ಬೆಲೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ನಿರ್ಧರಿಸಿರುವುದು ಸ್ವಾಗತರ್ಹ. ಆದರೆ, ಈ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ಯೋಗ್ಯ ಬೆಲೆ ಕೊಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಮಾರ್ಗದಲ್ಲಿ ಬಹುತೇಕ ಸಣ್ಣ ರೈತರಾಗಿದ್ದು, ಈ ಜಮೀನನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಹಲವರು ತೋಟ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವಜನಿಕ ಉದ್ದೇಶಕ್ಕಾಗಿ ರೈತರು ಭೂಮಿ ಬಿಟ್ಟುಕೊಡಲು ಸಿದ್ಧರಿದ್ದಾರೆ. ಹೀಗಾಗಿ ಇವರ ಭೂಮಿಗೆ ಉಪನೋಂದಣಿ ಕಚೇರಿಯಲ್ಲಿ ನಿಗದಿಯಾದ ದರಕ್ಕಿಂತ 20 ಪಟ್ಟು ಹೆಚ್ಚು ಮಾರುಕಟ್ಟೆ ಬೆಲೆ ಇದೆ. ಹಾಗಾಗಿ ಮಾರುಕಟ್ಟೆಯ 4 ಪಟ್ಟು ಅಂದರೆ ಅಂದಾಜು ಎಕರೆಗೆ ₹ 80 ಲಕ್ಷ ಬೆಲೆ ನೀಡಿ ಜಮೀನು ಖರೀದಿಸಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ಅಡಿಕೆ ತೋಟ ಇದ್ದರೆ ಇನ್ನೂ ಹೆಚ್ಚಿನ ಬೆಲೆ ನಿಗದಿ ಮಾಡಬೇಕು. ನಿರಾಶ್ರಿತ ರೈತರ ಕುಟುಂಬಕ್ಕೆ ಉದ್ಯೋಗ ಕೊಡಿಸಬೇಕು. ಇಲ್ಲ ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಇ.ಬಿ. ಜಗದೀಶ್, ಹಿಟ್ಟೂರು ರಾಜು, ಎಸ್. ಶಿವಮೂರ್ತಿ, ಕೆ. ರಾಜು, ಭೋಜಾನಾಯ್ಕ, ಜ್ಞಾನೇಶ್, ನೇಮರಾಜ್, ಯೋಗೀಶ್ ಇದ್ದರು.