ಶಿವಮೊಗ್ಗ: ‘ಸ್ವಾತಂತ್ರ್ಯ ಅಮೃತ ಮಹೋತ್ಸವ ಟೀಕಿಸುವ ಭರದಲ್ಲಿ ರಾಷ್ಟ್ರಧ್ವಜ ಅವಮಾನಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಷ್ಟ್ರಧ್ವಜದ ಬಣ್ಣ ಕೇಸರಿ, ಬಿಳಿ, ಹಸಿರು ಎಂದು ಹೇಳುವ ಬದಲಾಗಿ ಕೆಂಪು, ಬಿಳಿ, ಹಸಿರು ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ. ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಎಸಿಬಿ ರದ್ದು ಮಾಡಿದ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಈ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ ಬಂದಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಾಚಾರ ಮುಚ್ಚಿಡಲು ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚಿಸಿದ್ದರು. ನಮ್ಮ ಸರ್ಕಾರ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತದೆ’ ಎಂದರು.
ಪ್ರತಿ ಮನೆಯಲ್ಲಿ ಧ್ವಜ ಹಾರಿಸಿ ಈ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಕೆಲವೊಂದು ವಾರ್ಡ್ಗಳಲ್ಲಿ ಇನ್ನೂ ಧ್ವಜ ವಿತರಣೆಯಾಗಿಲ್ಲ. ಮತ್ತು ಧ್ವಜದ ಬಗ್ಗೆ ಕೆಲವು ಲೋಪವಿರುವ ಬಗ್ಗೆ ದೂರುಗಳು ಬರುತ್ತಿವೆ ಎಂಬ ಪ್ರಶ್ನೆಗೆ ಜನರಲ್ಲಿ ಜಾಗೃತಿ ಉಂಟಾಗಿರುವುದು ಸಂತೋಷದ ಸಂಗತಿ. ದೇಶ ಭಕ್ತಿ ರಾಷ್ಟ್ರಧ್ವಜದ ಬಗ್ಗೆ ಆಟೊ ಚಾಲಕರು, ಕೂಲಿ ಕಾರ್ಮಿಕರು ಸೇರಿ ಕಟ್ಟ ಕಡೆಯ ವ್ಯಕ್ತಿ ಕೂಡ ಆಸಕ್ತಿ ವಹಿಸಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಪ್ರಮುಖರಾದ ಜಗದೀಶ್, ನಾಗರಾಜ್, ಕೆ.ಇ. ಕಾಂತೇಶ್, ಚನ್ನಬಸಪ್ಪ, ಮೋಹನ್ ರೆಡ್ಡಿ, ಶಿವರಾಜ್, ಬಾಲು ಇದ್ದರು.