ತೀರ್ಥಹಳ್ಳಿ: ಕೇಂದ್ರ ಸರ್ಕಾರ ಅವರಸರದಲ್ಲಿ ಜಾರಿಗೆ ತಂದಿರುವ ಕೃಷಿ ಕಾಯ್ದೆಯಿಂದ ಸಣ್ಣ ರೈತರ ಹಿಡುವಳಿ ಜಾಗವನ್ನು ಖಾಸಗಿ ಕಂಪನಿಗಳು ಕಿತ್ತುಕೊಳ್ಳುವ ಹುನ್ನಾರ ನಡೆಸಿವೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ದೂರಿದರು.
ಕರ್ನಾಟಕ ರಾಜ್ಯ ರೈತ ಸಂಘ ತೀರ್ಥಹಳ್ಳಿ ತಾಲ್ಲೂಕು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಅಮೆರಿಕದಂತಹ ದೇಶದಲ್ಲಿ ಪ್ರಯೋಗಿಸಿದ ಕಾಯ್ದೆಯನ್ನೂ ಭಾರತದಂತಹ ಜನಸಂಖ್ಯಾ ದೇಶದಲ್ಲಿ ಜಾರಿಗೆ ತರುವುದು ಅಪಾಯಕಾರಿ. ನಿರುದ್ಯೋಗ ಸೃಷ್ಟಿಯಾಗುತ್ತಿರುವ ನಡುವೆ ಇಂತಹ ಕಾಯ್ದೆಯಿಂದ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸಮಾಜವನ್ನು ಹಾಳು ಮಾಡುತ್ತಿರುವುದು ಶೇ 99ರಷ್ಟು ಅಕ್ಷರಸ್ಥರು. ಮುಂದಿನ ಪೀಳಿಗೆಯನ್ನು ರಕ್ಷಿಸಬೇಕಾದ ಯುವಕರು ಪ್ರಶ್ನಿಸಿ ಜನರ ಮನಃಸ್ಥಿತಿ ಬದಲಾಯಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಮುಖಂಡ ಕಂಬಳಿಗೆರೆ ರಾಜೇಂದ್ರ, ಪ್ರಗತಿಪರ ಚಿಂತಕ ನೆಂಪೆ ದೇವರಾಜ್, ರೈತ ಸಂಘದ ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ, ಪ್ರಗತಿಪರ ಕೃಷಿಕ ಎಸ್.ಟಿ. ದೇವರಾಜ್ ಮಾತನಾಡಿದರು.