ಶಿಕಾರಿಪುರ:ಜಗತ್ತು ಭಾರತದ ಕಡೆ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ನಡೆದ ಸೇವೆ ಸಮರ್ಪಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮೋದಿ ಅವರು ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡಿದ್ದಾರೆ. ತಾಲ್ಲೂಕಿನಲ್ಲಿ ಮೋದಿ ಜನ್ಮದಿನವನ್ನು ಸೇವೆ ಸಮರ್ಪಣೆ ಹೆಸರಿನಲ್ಲಿ ಉತ್ತಮ ರೀತಿ ಆಚರಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸ್ಥಾನಮಾನದ ನಿರೀಕ್ಷೆ ಇಲ್ಲದೇ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
‘ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ಹಲವು ಶರಣ, ಶರಣೆಯರು ತಾಲ್ಲೂಕಿನಲ್ಲಿ ಜನ್ಮ ತಾಳಿರುವುದು ಸಂತೋಷದ ಸಂಗತಿ. ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರುತ್ತಿರುವುದು ತೃಪ್ತಿ ತಂದಿದೆ. ಯಾವುದೇ ಸ್ಥಾನಮಾನದ ನಿರೀಕ್ಷೆ ಇಲ್ಲದೆ ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಸರ್ಕಾರದ ಕಾರನ್ನು ಬಿಟ್ಟು, ನನ್ನ ಸ್ವಂತ ವಾಹನದಲ್ಲಿ ಪ್ರವಾಸ ನಡೆಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಪಕ್ಷ ಬಲಪಡಿಸುತ್ತೇನೆ’ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ‘ಪ್ರಧಾನಿ ನರೇಂದ್ರ ಮೋದಿ ಮಹಿಳೆಯರು, ಕೂಲಿಕಾರ್ಮಿಕರು ಸೇರಿ ಎಲ್ಲಾ ವರ್ಗದ ಜನರ ಬಗ್ಗೆ ಚಿಂತನೆ ಮಾಡುತ್ತಾರೆ. ಮೋದಿ ದೇಶ ಭಕ್ತ ಪ್ರಧಾನಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಜಾತಿ ಜನರ ಅಭಿವೃದ್ಧಿಗಾಗಿ ಪೂರಕವಾಗುವ ಕಾರ್ಯಕ್ರಮ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ಮೋದಿ ಜನ್ಮದಿನ ಪ್ರಯುಕ್ತ ನೇತ್ರ ತಪಾಸಣೆ ಸೇರಿ ಹಲವು ಸೇವಾ ಕಾರ್ಯಕ್ರಮಗಳು ನಡೆದಿವೆ. ಬಿಜೆಪಿ ದೇಶಭಕ್ತರ ಪಕ್ಷವಾಗಿದ್ದು, ತತ್ವ ಸಿದ್ಧಾಂತವನ್ನು ಹೊಂದಿದೆ. ಹಿರಿಯರು ಪಕ್ಷ ಸಂಘಟನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕಾರ್ಯಕರ್ತರು ಜಾತಿ ಭೇದ ಮರೆತು ಪಕ್ಷ ಸಂಘಟಿಸಬೇಕು’ ಎಂದು ಸಲಹೆ ನೀಡಿದರು.