ತೀರ್ಥಹಳ್ಳಿ: ‘ಸಭೆಗೆ ಬಂದು ಸಬೂಬು ಹೇಳಬೇಡಿ. ನಿಮ್ಮಿಂದ ಸರ್ಕಾರ ತಲೆ ತಗ್ಗಿಸಬೇಕಾಗಿದೆ. ಬೇಗುವಳ್ಳಿಯಲ್ಲಿ ಟಾರ್ಪಲ್ ಹಿಡಿದು ಅಂತ್ಯಸಂಸ್ಕಾರ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ತಕ್ಷಣ ತಾತ್ಕಾಲಿಕ ಮಂಟಪ ನಿರ್ಮಾಣ ಮಾಡಬೇಕು’ ಎಂದು ಅಧಿಕಾರಿಗಳಿಗೆ ಗೃಹಸಚಿವ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರ ಶುಕ್ರವಾರ ಮಳೆಯಿಂದ ತಾಲೂಕಿನ ಹಾನಿ ಬಗ್ಗೆ ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿ ಮಾತನಾಡಿದರು.
‘ತಾಲ್ಲೂಕಿನಾದ್ಯಂತ ಮಳೆಯಿಂದ ಬಾರಿ ತೊಂದರೆ ಯಾಗುತ್ತಿದೆ. ಪ್ರಕೃತಿ ವಿಕೋಪದಿಂದ ಜನರು ಪರದಾಡು ತ್ತಿದ್ದಾರೆ. ಪಿಡಿಒ, ವಿಎ, ಆರ್ಐ ರಜೆ ಹಾಕದೆ ಮನೆ ಬಾಗಿಲಿಗೆ ತೆರಳಿ ಕಾರ್ಯ ನಿರ್ವಹಿಸಿ. ಬೇಜ ವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ. ನೀವೂ ಸರ್ಕಾರದ ಪ್ರತಿನಿಧಿಗಳು 24X7 ಕೆಲಸ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.
‘ದಬ್ಬಣಗದ್ದೆ, ದೇವಂಗಿ ಮುಂತಾದ ಕಡೆ ಮನೆ ಉರುಳಿದರೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವ ಕ್ರಮ ತೆಗೆದುಕೊಂಡಿಲ್ಲ. ಘಟನಾ ಸ್ಥಳಕ್ಕೆ ಯಾಕ್ರಿ ಹೋಗಿಲ್ಲ?. ನಿಮ್ಮಲ್ಲಿ ಮನುಷ್ಯತ್ವ ಇಲ್ವೆನ್ರಿ?. ಇಷ್ಟ ಇದ್ರೆ ಕೆಲಸ ಮಾಡಿ ಇಲ್ಲ ಮನೆಗೆ ಹೋಗಿ’ ಎಂದು ತರಾಟೆಗೆ ತೆಗೆದುಕೊಂಡರು.
ತಹಶೀಲ್ದಾರ್ ಅಮೃತ್ ಆತ್ರೇಶ್, ಇಒ ಶೈಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಕೋಸ್ ಮಾಹಿತಿ ನೀಡಿದರು.
ಸಭೆಯಲ್ಲಿ ಮೆಸ್ಕಾಂ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಅರಣ್ಯ, ಸಮಾಜ ಕಲ್ಯಾಣ, ಕಂದಾಯ, ಪಶುಸಂಗೋಪನೆ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದ್ದರು.