ಭದ್ರಾವತಿ: ‘ನೈರುತ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯು ಇತರ ಚುನಾವಣೆಗಳಂತಲ್ಲ. ಇಲ್ಲಿ ಸ್ಪರ್ಧಿಸುವ ಹಾಗೂ ಸ್ಪರ್ಧಿಯನ್ನು ಚುನಾಯಿಸುವ ಇಬ್ಬರೂ ವಿದ್ಯಾವಂತರಾಗಿರುತ್ತಾರೆ. ಈ ಚುನಾವಣೆಯಲ್ಲಿ ಪ್ರಬುದ್ಧರಿಂದ, ಪ್ರಬುದ್ಧರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಗುರುವಾರ ನಗರದಲ್ಲಿ ಆಯೋಜಿಸಲಾಗಿದ್ದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಬಂದ ವಿಜಯೇಂದ್ರ ಅವರಿಗೆ ಯುವಕರು ಪಟಾಕಿ ಸಿಡಿಸಿ, ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು.
‘ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೊಟ್ಟೆಪಾಡಿಗಾಗಿ ರಾಜಕೀಯ ಪ್ರವೇಶಿಸಿಲ್ಲ. ಅವರ ಸೇವೆಯನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈಶ್ವರಪ್ಪನವರು ಸಹ ಬಿಜೆಪಿಯಲ್ಲಿ ಇದ್ದಾಗ ಅವರ ಬಗ್ಗೆ ಚರ್ಚಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅವರ ಮಾತುಗಳೇ ಬೇರೆ ಆಗಿವೆ’ ಎಂದು ಹೇಖಿದರು.
ಪದವೀಧರರಿಂದಲೇ ಸಾಕಷ್ಟು ಮತಗಳು ಅಸಿಂಧು: ‘ಮತದಾರರು ಕೊಟ್ಟಿರುವ ಬಾಕ್ಸ್ನ ಒಳಗಡೆಯೇ ಚುನಾಯಿಸುವ ಅಭ್ಯರ್ಥಿಯನ್ನು ಗುರುತಿಸಬೇಕು. ಬೇರೆ ಯಾವ ಗುರುತು ಹಾಕಿದರು ಅದು ಅಸಿಂಧುಗೊಳ್ಳುತ್ತದೆ. ಯಾವುದೇ ಚಿಹ್ನೆಗಳು ಇರುವುದಿಲ್ಲ. ಮತದಾನದ ಸಮಯ ಬೆಳಿಗ್ಗೆ 8ರಿಂದ ಸಂಜೆ 4.30ರವರೆಗೆ ಅಷ್ಟೇ ಇರುತ್ತದೆ. 20ರಿಂದ 25 ಮತದಾರರಿಗೆ ಒಬ್ಬ ಮಾರ್ಗಸೂಚಕನನ್ನು ಬಿಜೆಪಿಯಿಂದ ನೇಮಿಸಲಾಗಿರುತ್ತದೆ’ ಎಂದು ಹೇಳಿದರು.
‘ಭಾವೈಕ್ಯಕ್ಕಾಗಿ, ಪದವೀಧರರೆಲ್ಲರ ಉತ್ತಮ ಭವಿಷ್ಯಕ್ಕಾಗಿ ಮತ ನೀಡಿ’ ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಧನಂಜಯ ಸರ್ಜಿ ಹೇಳಿದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಮಾತನಾಡಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಧರ್ಮಪ್ರಸಾದ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕರುಣಾಮೂರ್ತಿ, ಧರ್ಮಣ್ಣ, ಅನಂತಕುಮಾರ್, ಬಿ.ಕೆ. ಶ್ರೀನಿವಾಸ್, ಗೀತಾ ಸತೀಶ್, ಮಂಗೋಟೆ ರುದ್ರೇಶ್, ಶ್ರೀಹರ್ಷ, ತಿಮ್ಮೇಗೌಡ, ಅನುಪಮಾ ಚನ್ನೇಶ್, ಭಾಗ್ಯಮ್ಮ, ಅಣ್ಣಪ್ಪ, ಉಮೇಶ್, ತೀರ್ಥಯ್ಯ ಪಾಲ್ಗೊಂಡಿದ್ದರು.