ಶಿವಮೊಗ್ಗ: ಚುನಾವಣೆಯಲ್ಲಿ ಟಿಕೆಟ್ ಪಡೆಯಲು, ಸ್ಪರ್ಧೆಗೆ ಇಳಿಯಲು ಲಾಭಿ ನಡೆಸುವುದು ಸಹಜ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಲಾಬಿ ಆರಂಭವಾಗಿದೆಯಲ್ಲ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಚುನಾವಣೆ ಬಂದರೆ ಲಾಬಿ ಸಹಜ. ಅದರಲ್ಲಿ ಅಚ್ಚರಿಪಡುವುದು ಏನಿದೆ? ಮದುವೆ ಅಂದ ತಕ್ಷಣ ಹುಡುಗಿ ಹುಡುಕಲು ಆರಂಭಿಸಿದಂತೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಹುಡುಕಾಟ ಇರುತ್ತದೆ. ಯೋಗ್ಯ ವರನನ್ನೇ ಹುಡುಗಿಯೂ ಆಯ್ಕೆ ಮಾಡುತ್ತಾಳೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ರಾಜ್ಯ ಚುನಾವಣೆ ಸಮಿತಿಯ ಸಭೆ ಇದುವರೆಗೂ ಕರೆದಿಲ್ಲ. ಚುನಾವಣೆಯ ದಿನ ಈಗಷ್ಟೇ ಘೋಷಣೆ ಆಗಿದೆ. ಸಮಿತಿಯಲ್ಲಿ ಆಕಾಂಕ್ಷಿಗಳ ಹೆಸರು ಫಟ್ಟಿಮಾಡಲಾಗುವುದು. ನಂತರ ಪ್ರಕಟಿಸಲಾಗುವುದು ಎಂದರು.