ಹೊಸನಗರ: ಅಡಿಕೆ ನಿಷೇಧ ಕುರಿತ ವದಂತಿ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.
ಹೊನ್ನಾಳಿ–ಬೈಂದೂರು ರಾಜ್ಯ ಹೆದ್ದಾರಿ 26ರ ನಾಗೋಡಿ ಯಿಂದ ಚಿಕ್ಕಪೇಟೆ ನಗರದ ವರೆಗೆ ಅಗಲೀಕರಣ ಹಾಗೂ ಡಾಂಬರೀಕರಣದ ಸುಮಾರು ₨28 ಕೋಟಿ ಅನುದಾನದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಶನಿವಾರ ನೆರವೇರಿಸಿ ಮಾತನಾಡಿದರು.
ಯಾವುದೇ ಲಾಬಿಗೆ ಕೇಂದ್ರ ಸರ್ಕಾರ ಬಲಿ ಆಗಿಲ್ಲ. ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ಕೇಂದ್ರ ಸರ್ಕಾರ ನೀತಿ ಜಾರಿಗೊಳಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ನಿಯೋಗವನ್ನು ದೆಹಲಿಗೆ ಹೋಗುವ ಕುರಿತಂತೆ ಯೋಚಿಸಲಾಗಿದೆ ಎಂದು ಹೇಳಿದರು.
ಅನೇಕ ವರ್ಷದ ಬಳಿಕ ಹೊನ್ನಾಳಿ–ಕೊಲ್ಲೂರು–ಬೈಂದೂರು ಸಂಪರ್ಕದ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿದೆ. ಕಳಪೆ ಕಾಮಗಾರಿ ನಡೆದಲ್ಲಿ ಗ್ರಾಮಸ್ಥರು ತಮಗೆ ತಿಳಿಸುವಂತೆ ಸೂಚಿಸಿದರು.
ನಿಟ್ಟೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ಗಿರೀಶ್ ಅಧ್ಯಕ್ಷತೆ ವಹಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ್, ಶುಭಾ ಕೃಷ್ಣಮೂರ್ತಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸುಕನ್ಯಾ ರಾಧಾಕಾಕೃಷ್ಣ, ಸದಸ್ಯರಾದ ಶಿವರಾಮ ಶೆಟ್ಟಿ, ಶ್ರೀಕಾಂತ್, ಸುಬ್ರಹ್ಮಣ್ಯ ಆಚಾರ್, ಮೂಕಾಂಬಿಕಾ, ರುಕ್ಮಿಣಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೇಶಪ್ಪ, ಜೆಇ ಮಲ್ಲಿಕಾರ್ಜುನ್, ಗುತ್ತಿಗೆದಾರ ತಿಮ್ಮಪ್ಪ ಶೇರಿಗಾರ್, ಗ್ರಾಮದ ಪ್ರಮುಖರಾದ ಯೋಗರಾಜ್ ಗುರುಟೆ, ಎ.ಒ ರಾಮಚಂದ್ರ ಉಪಸ್ಥಿತರಿದ್ದರು.
ಗ್ರಾಮ ಪಂಚಾಯ್ತಿ ಸದಸ್ಯ ಕೂಡ್ಲುಕೊಪ್ಪ ಸುರೇಶ್ ಸ್ವಾಗತಿಸಿದರು. ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಚಂದಯ್ಯ ವಂದಿಸಿದರು.