ಕೋರ: ಹೋಬಳಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಒಂದನೇ ಹಂತದಲ್ಲಿ ವಿಷಪೂರಿತ ನೀರು ಕುಡಿದು 22 ಕುರಿಗಳು ಮೃತಪಟ್ಟಿವೆ.
ತರೂರು ಹಾಗೂ ಚಿಕ್ಕದಾಸರಹಳ್ಳಿ ಗೊಲ್ಲರಹಟ್ಟಿಯ ವಲಸೆ ಕುರಿಗಾಹಿಗಳು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರೈತರ ಜಮೀನಿನಲ್ಲಿ ಮಂದೆ ಹಾಕಿ ಕುರಿ ಮೇಯಿಸುತ್ತಿದ್ದರು.
ಭಾನುವಾರ ಕೈಗಾರಿಕಾ ಪ್ರದೇಶದ ಅಕ್ಕಪಕ್ಕ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದರು. ಈ ವೇಳೆ ಫುಡ್ಪಾರ್ಕ್ ಸಮೀಪ ರೂಪಿಂಗ್, ಕೆಮಿಕಲ್ ಹಾಗೂ ಇತರೆ ಫ್ಯಾಕ್ಟರಿಗಳಿದ್ದು, ಈ ಕಾರ್ಖಾನೆಗಳಿಂದ ಬಿಡುಗಡೆಯಾದ ವಿಷ ತ್ಯಾಜ್ಯ ಸೇವಿಸಿ ಈ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ಕೋರ ಠಾಣೆ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.