ತುಮಕೂರು: ಬುಗುಡನಹಳ್ಳಿ ಕೆರೆಯಲ್ಲಿ ಪ್ರಸ್ತುತ 270 ಎಂಸಿಎಫ್ಟಿ ನೀರಿನ ಸಂಗ್ರಹವಿದ್ದು, ಆ.24ರ ವರೆಗೆ ನಗರಕ್ಕೆ ನೀರು ಸರಬರಾಜು ಮಾಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದರು.
ಬಂಡೇಪಾಳ್ಯ, ಚೇತನ ಬಡಾವಣೆ, ದಿಬ್ಬೂರು ಸೇರಿದಂತೆ ಇತರೆ ಬಡಾವಣೆಗಳಿಗೆ ಶನಿವಾರ ಭೇಟಿ ನೀಡಿ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿದರು. ನೀರಿನ ಪೂರೈಕೆಯ ಬಗ್ಗೆ ಸ್ಥಳೀಯರಿಂದ ಅಗತ್ಯ ಮಾಹಿತಿ ಪಡೆದರು. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪಾಲಿಕೆಯಿಂದ ವಾಟರ್ ಎಟಿಎಂ ಅಳವಡಿಸಲಾಗುತ್ತಿದೆ. ಎಟಿಎಂ ಮೂಲಕ ₹1ಕ್ಕೆ ಅರ್ಧ ಲೀಟರ್, ₹2ಕ್ಕೆ ಒಂದು ಲೀಟರ್ ನೀರು ಪಡೆಯಬಹುದು ಎಂದರು.
ನಗರದ ಎಲ್ಲ ಕಡೆ ಪ್ರಸ್ತುತ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. 45 ಜಲ ಸಂಗ್ರಹಾಗಾರ ಹಾಗೂ 710 ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹೊಸದಾಗಿ 3 ಕೊಳವೆ ಬಾವಿ ಕೊರೆಸಿದ್ದು, 25 ಹಳೆಯ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ ನೀರು ಪೂರೈಕೆಯಾಗದ ಬಡಾವಣೆಗಳಿಗೆ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸದರಿ ಬಡಾವಣೆಗಳಿಗೆ ಹೇಮಾವತಿ ನೀರು ಪೂರೈಕೆಗೆ ಪೈಪ್ಲೈನ್ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ನಗರದಲ್ಲಿ 36 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ನೀರಿನ ಸಮಸ್ಯೆಯಾದರೆ ಪಾಲಿಕೆಯ ಸಹಾಯವಾಣಿ 9449872599 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಪಾಲಿಕೆ ಉಪ ಆಯುಕ್ತ ವಿನಯ್ ಕುಮಾರ್, ಎಂಜಿನಿಯರ್ಗಳಾದ ಸುಧೀಂದ್ರ, ರಾಥೋಡ್ ಇತರರು ಹಾಜರಿದ್ದರು.