ತುರುವೇಕೆರೆ: ‘ಖಾಸಗಿ ಶಾಲೆ ಶಿಕ್ಷಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ಅಧ್ಯಕ್ಷ ಸಿ.ಎಂ.ನಾಗೇಶ್ ಎಚ್ಚರಿಸಿದರು.
ಪಟ್ಟಣದಲ್ಲಿ ಖಾಸಗಿ ಶಾಲಾ ಶಿಕ್ಷಕರ ಬಳಗದ ತಾಲ್ಲೂಕು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ನಿಂದಾಗಿ ರಾಜ್ಯದ 3.45 ಲಕ್ಷಕ್ಕೂ ಹೆಚ್ಚು ಖಾಸಗಿ ಶಾಲೆ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ, ಈವರೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಧಾರವಾಡ ನ್ಯಾಯಾಲಯವು ಪ್ರಾಥಮಿಕ ಶಾಲೆ ಖಾಸಗಿ ಶಿಕ್ಷಕರಿಗೆ ತಿಂಗಳಿಗೆ ₹ 26.300 ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ₹33.300 ವೇತನ ನೀಡಬೇಕೆಂದು ವಿಶೇಷ ಪ್ರಕರಣವೊಂದರಲ್ಲಿ ಆದೇಶಿಸಿದ್ದರೂ ಈವರೆಗೆ ಸರ್ಕಾರ ಪಾಲಿಸಿಲ್ಲ ಎಂದರು.
ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಶಾಲಾ ಶಿಕ್ಷಕರು ವಂತಿಗೆ ಹಣ ನೀಡುತ್ತಾ ಬಂದಿದ್ದರೂ, ಅದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆಯಿಲ್ಲದ್ದರಿಂದ ನಿವೃತ್ತಿ ನಂತರ ಅವರ ಬದುಕು ಅತಂತ್ರವಾಗಲಿದೆ ಎಂದರು.
ಖಾಸಗಿ ಶಾಲಾ ಶಿಕ್ಷಕರ ಬಳಗದ ರಾಜ್ಯ ಕಾರ್ಯದರ್ಶಿ ಅಮರೇಂದ್ರ ಮಾತನಾಡಿ, ಪುಸ್ತಕ ಹಿಡಿದ ಶಿಕ್ಷಕನ ಬದುಕು ಅನಾಥವಾಗಿದ್ದು ಸಂಘಟನೆ, ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಬೇಕಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣನಾಯಕ್ ಮಾತನಾಡಿ, ಸಂಘಕ್ಕೆ ರಾಜ್ಯದಾದ್ಯಂತ 15 ಸಾವಿರಕ್ಕೂ ಹೆಚ್ಚು ಶಿಕ್ಷಕರು ನೋಂದಾಣಿಯಾಗಿದ್ದಾರೆ. ಹೋರಾಟಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ನೈತಿಕ ಬೆಂಬಲ ನೀಡಲಿದ್ದಾರೆ ಎಂದರು.
ತಾಲ್ಲೂಕು ಗೌರವಾಧ್ಯಕ್ಷ ತುಕಾರಾಂ, ಅಧ್ಯಕ್ಷ ಸಿ.ವಿ.ಮೋಹನ್ ಕುಮಾರ್, ಕಾರ್ಯದರ್ಶಿ ಹೇಮಂತ್, ಉಪನ್ಯಾಸಕರ ಸಂಘದ ಡಾ.ಚಂದ್ರಯ್ಯ, ಶ್ರೀನಿವಾಸ್, ಶಶಿಕುಮಾರ್, ನರಸಿಂಹಮೂರ್ತಿ, ಪ್ರಕಾಶ್, ಸುರೇಂದ್ರಕುಮಾರ್ ಇದ್ದರು.