ತುಮಕೂರು: ಅಡುಗೆ ಎಣ್ಣೆಯ ಪ್ಯಾಕೇಟ್ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅವರು ಖರೀದಿಸಿದ್ದ ಎಣ್ಣೆಯ ಪ್ಯಾಕೇಟ್ನಲ್ಲಿ ಸತ್ತ ಇಲಿ ಸಿಕ್ಕಿದೆ!
ಕಳೆದ ಡಿಸೆಂಬರ್ 15ರಂದು ನಗರದ 1ನೇ ವಾರ್ಡ್ ವ್ಯಾಪ್ತಿಯ ದಾಸಿಮುದ್ದಯ್ಯನ ಪಾಳ್ಯದ ವಿಜಯಲಕ್ಷ್ಮಿ ಡಿಪೊದಲ್ಲಿ ಅಗತ್ಯ ಸಾಮಗ್ರಿಯ ಜತೆಗೆ ಎಣ್ಣೆ ಪ್ಯಾಕೇಟ್ ಖರೀದಿಸಿದ್ದರು. ಫೆ. 11ರಂದು ಪ್ಯಾಕೇಟ್ ತೆರೆದು ನೋಡಿದಾಗ ಸತ್ತ ಇಲಿ ಕಂಡು ಗಾಬರಿಯಾಗಿದ್ದಾರೆ.
‘ಜನ ಸಾಮಾನ್ಯರು ಅಡುಗೆಗೆ ಉಪಯೋಗಿಸುವ ‘ರುಚಿ ಗೋಲ್ಡ್’ ಎಣ್ಣೆ ಪ್ಯಾಕೇಟ್ನಲ್ಲಿ ಇಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಎಷ್ಟು ಚೆನ್ನಾಗಿ ತಪಾಸಣೆ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆ ಸೂಕ್ತ ಉದಾಹರಣೆ. ರುಚಿ ಗೋಲ್ಡ್ ಕಂಪನಿಯು ಇಲಿ ಇರುವ ಪ್ಯಾಕೇಟ್ ಅನ್ನು ಮಾರುಕಟ್ಟೆಗೆ ಬಿಟ್ಟಿರುವುದು ಜನಸಾಮಾನ್ಯರಿಗೆ ಮಾಡಿದ ಮೋಸ’ ಎಂದು ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ‘ರುಚಿ ಗೋಲ್ಡ್’ ಎಣ್ಣೆ ತಯಾರಿಸುವ ಕಂಪನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಅನ್ಯಾಯಕ್ಕೆ ದಂಡ ಸಮೇತ ವಸೂಲು ಮಾಡಬೇಕು. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.