ಹುಲಿಯೂರುದುರ್ಗ: ಹಳೇವೂರಿನ ಹುಲಿಯೂರಮ್ಮ ಜಾತ್ರಾ ಮಹೋತ್ಸವ ಮಾರ್ಚ್ 15ರಿಂದ ಆರಂಭವಾಗಿ ಒಂದು ವಾರ ಕಾಲ ವಿಜೃಂಭಣೆಯಿಂದ ನೆರವೇರಿತ್ತು. ಮರು ದಿನವೇ ಘೋಷಣೆಯಾದ ಲಾಕ್ಡೌನ್ನಿಂದಾಗಿ ದೇವಾಲಯದ ಬಾಗಿಲು ಮುಚ್ಚಿತ್ತು.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಮನರಂಜನಾ ಸೆಟ್, ಸಾಧನ- ಸಲಕರಣೆಗಳು ದಿಕ್ಕುಕಾಣದ ಸ್ಥಿತಿಯಲ್ಲಿ ಶಿಥಿಲಗೊಂಡು ದೇವಾಲಯದ ಮುಂದಿನ ಹೊಲದ ಬಯಲಿನಲ್ಲಿ ಹಾಗೆಯೇ ಇವೆ.
ಇದು ಬಿಹಾರ ಮೂಲದ ರಜನೀಶ್ ಕುಮಾರ್ ಪಾಂಡೆ ಮಾಲೀಕತ್ವದ ಕುಸುಮಾ ಅಮ್ಯೂಸ್ಮೆಂಟ್ ಪಾರ್ಕ್ ಸೆಟ್ವೊಂದರ ಶೋಚನೀಯ ಪರಿಸ್ಥಿತಿ. ಅದರಂತೆ ಹತ್ತಾರು ಕಾರ್ಮಿಕರು ಹಾಗೂ ಮಾಲೀಕರ ಬದುಕು ಈಗ ಬೀದಿಗೆ ಬಿದ್ದಿದೆ.
ಹಿರಿಯರು, ಕಿರಿಯರೆನ್ನದೆ ಆಡುವ ಜೇಂಟ್ವ್ಹೀಲ್, ಡ್ರಾಗನ್ ಟ್ರೈನ್, ಕೊಲಂಬಸ್ ಹಡಗು ಹಾಗೂ ಸೊಲ್ಯಾಂಬೋ ಸವಾರಿಯ ಆಟಿಕೆಗಳು ಜೊತೆಗೆ ಮಕ್ಕಳ ಬೌನ್ಸಿಂಗ್ ಮಿಕ್ಕಿ ಮೌಸ್ ಎಲ್ಲವೂ ಈಗ ಗಾಳಿ ಮಳೆಯಲ್ಲಿ ನೆನೆಯುತ್ತಿವೆ.
50 ವರ್ಷಗಳಿಂದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದ ಭಾಗಗಳಲ್ಲಿ ಸೆಟ್ ಹಾಕಿಕೊಂಡು ತಮ್ಮ ಸಂಚಾರಿ ಅಮ್ಯೂಸ್ಮೆಂಟ್ ಒಡನಾಟದಲ್ಲಿ ಬದುಕಿದ್ದೇವೆ. ಆದರೆ ಇಂತಹದೊಂದು ದುಃಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ನಿರ್ವಹಣೆ ಹೊತ್ತಿರುವ ಕಾರ್ಮಿಕರು ಹಾಗೂ ಮಾಲೀಕ ಖೇದ ವ್ಯಕ್ತಪಡಿಸುತ್ತಾರೆ.
ಕೆಲ ದಿನಗಳ ಹಿಂದೆ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿವರ ಪಡೆದು ಫೋಟೊ ತೆಗೆದುಕೊಂಡು ಹೋದರಷ್ಟೇ. ಯಾವುದೇ ನೆರವು ದೊರೆತಿಲ್ಲ. ವಿಭಾಗ ಮಟ್ಟದ ನಗರ ಪ್ರದೇಶಗಳಲ್ಲಿ ಪೂರ್ಣ ಮುನ್ನೆಚ್ಚರಿಕೆ ಕ್ರಮ ಹಾಗೂ ನಿಬಂಧನೆ ಮೇಲೆ ತಮ್ಮ ಸಂಚಾರಿ ಮನರಂಜನಾ ಆಟಿಕೆಗಳ ಚಾಲನೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಕುಸುಮಾ ಅಮ್ಯೂಸ್ಮೆಂಟ್ ಸೆಟ್ ಮಾಲೀಕ ರಜನೀಶ್ ಕುಮಾರ್ ಪಾಂಡೆ ಒತ್ತಾಯಿಸಿದರು.