ಶಿರಾ: ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ನ್ಯಾಯಾಲಯದ ಆವರಣದಿಂದ ಹೊರಟ ವಕೀಲರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ನಾಗಮಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಪಿ.ಧರಣೇಶ್ ಗೌಡ ಮಾತನಾಡಿ, ಜಿಲ್ಲೆ ಅತಿ ದೊಡ್ಡದಿದ್ದು ಆಡಳಿತಾತ್ಮಕ ದೃಷ್ಟಿಯಿಂದ ತಕ್ಷಣ ಶಿರಾವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ ಮಾತನಾಡಿ, ನಗರ ವೇಗವಾಗಿ ಬೆಳೆಯುತ್ತಿದ್ದು, ಜಿಲ್ಲಾ ಕೇಂದ್ರವಾಗುವ ಎಲ್ಲ ಆರ್ಹತೆ ಹೊಂದಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು ಶಿರಾ ಮೂಲಕ ಹಾದು ಹೋಗುತ್ತಿದೆ. ಶಿರಾ ಸುತ್ತಮುತ್ತ ಸುಮಾರು 2,500 ಎಕರೆ ಸರ್ಕಾರಿ ಜಮೀನು ಇರುವುದರಿಂದ ಸರ್ಕಾರಿ ಕಚೇರಿ ಮತ್ತು ಇತರೆ ಕೆಲಸಗಳಿಗೆ ಅನುಕೂಲವಾಗುವುದು ಎಂದರು.
ಹೇಮಾವತಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಯಿಂದ ಶಿರಾ ತಾಲ್ಲೂಕು ತ್ರಿವೇಣಿ ಸಂಗಮವಾಗುವುದರಿಂದ ನೀರಿನ ಸಮಸ್ಯೆ ಬಗೆ ಹರಿದಿದೆ. ಕೈಗಾರಿಕಾ ವಲಯವಾಗುತ್ತಿದ್ದು ಜಿಲ್ಲೆಯಾಗುವ ಎಲ್ಲ ಲಕ್ಷಣ ಹೊಂದಿರುವುದರಿಂದ ಶಿರಾ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕುಗಳನ್ನು ಸೇರಿಸಿ ನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದರು.
ವಕೀಲರ ಸಂಘದ ಉಪಾಧ್ಯಕ್ಷೆ ಸರಸ್ವತಿ, ಜಂಟಿ ಕಾರ್ಯದರ್ಶಿ ಡಿ.ಈರಣ್ಣ, ಖಜಾಂಚಿ ರಾಮಕೃಷ್ಣ, ವಕೀಲರಾದ ಜವನಯ್ಯ, ಹೊನ್ನೇಶ್ ಗೌಡ, ರಾಮಚಂದ್ರಪ್ಪ, ಮಂಜುನಾಥ್, ಶಿವಕುಮಾರು, ವೆಂಕಟೇಶ್, ರಾಘವೇಂದ್ರ, ಶಶಿಧರ್, ಮಂಗಳಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.