ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ದೇಶದ ಬೌದ್ಧಿಕ ಜ್ಞಾನದ ಸಂಕೇತವಾಗಿದ್ದಾರೆ ಎಂದು ನ್ಯಾಯಾಧೀಶ ಬಾಬಾ ಸಾಹೇಬ್ ಎಲ್.ಜಿನರಾಳ್ಕರ್ ಅಭಿಪ್ರಾಯಪಟ್ಟರು.
ನಗರದ ಸಮಾಜ ಕಲ್ಯಾಣ ಇಲಾಖೆಯ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಕರ್ನಾಟಕ ಬೌದ್ಧ ಸಮಾಜ, ಸಿಜ್ಞಾ ಯುವ ಸಂವಾದ ಕೇಂದ್ರ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರನ್ನು ಜಗತ್ತೇ ವಿಶ್ವದ ಜ್ಞಾನದ ಚಿಹ್ನೆಯಾಗಿ ಒಪ್ಪಿಕೊಂಡರೂ ಭಾರತ ಮಾತ್ರ ಜಾತಿ ಸಂಕೋಲೆಗಳಿಂದ ಬಂಧಿಸಿ ನೋಡುತ್ತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಪ್ರಸಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತಾದ ಧ್ವನಿ ಬೆಳಕು ಸಂಯೋಜನೆಯ ಭಾರತ ಭಾಗ್ಯವಿಧಾತ ಚಿತ್ರವು ನಮ್ಮ ದೇಶದ ಬಹು ಆಯಾಮಗಳ ಮೌಲಿಕ ವಿಷಯಗಳನ್ನು ಒಳಗೊಂಡಿದೆ’ ಎಂದು ಅಶಯ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಡಾ.ಕೆ.ನರಸಿಂಹಪ್ಪ ಕಾಳೇನಹಳ್ಳಿ ಮಾತನಾಡಿ, ‘ಅಂಬೇಡ್ಕರ್ ಅವರು ಕೇವಲ ದೀನ ದಲಿತರ ಸ್ವತ್ತಲ್ಲ; ಸಮಗ್ರ ರಾಷ್ಟ್ರಾಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳು ಅಪಾರ’ ಎಂದರು.
ಸಿಜ್ಞಾ ಸಂವಾದ ಕೇಂದ್ರದ ಜ್ಞಾನ ಸಿಂಧುಸ್ವಾಮಿ ಮತ್ತು ಕಾವ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡೆಸಿದರು.
ಅತಿಥಿಗಳಾದ ಡಾ.ಮುರಳೀಧರ್, ಕೆ.ಎನ್.ಲಕ್ಷ್ಮೀರಂಗಯ್ಯ, ರೇಣುಕಾ ಜಿನರಾಳ್ಕರ್, ಕವಿ ಡಾ.ಹನುಮಂತರಾಯಪ್ಪ ಪಾಲಸಂದ್ರ, ಅರುಣೋದಯ ಸಂಸ್ಥೆಯ ಅಧ್ಯಕ್ಷ ಡಾ.ಎಲ್.ಮುಕುಂದ ನಿಲಯಪಾಲಕಿ ವೇದವಾತಿ ಹಾಗೂ ವಕೀಲ ಶ್ರೀನಿವಾಸ್ ಇದ್ದರು.