ತುರುವೇಕೆರೆ: ‘ಬಸವಣ್ಣನವರು ಎಲ್ಲ ಸಮುದಾಯದ ಜ್ಞಾನಿಗಳನ್ನು ಸೇರಿಸಿಕೊಂಡು ಅನುಭವಮಂಟಪ ಸ್ಥಾಪಿಸಿ, ಆ ಮೂಲಕ ಸಮಾನತೆ ಸಾರಿದರು’ ಎಂದು ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ವೀರಶೈವ ಮಹಾಸಭಾ, ತಾಲ್ಲೂಕು ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಡೆದ ಗುರು ಸಿದ್ಧರಾಮೇಶ್ವರರ 848ನೇ ಜಯಂತಿ, ಪ್ರತಿಭಾ ಪುರಸ್ಕಾರ, ಮಹಿಳಾ ಮತ್ತು ಯುವಘಟಕಗಳ ಉದ್ಘಾಟನೆ ಹಾಗೂ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಉಧ್ಘಾಟಿಸಿ ಮಾತನಾಡಿದರು.
‘ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯಂತಹ ಮಹಾನ್ ಸಂತರು ಮಧ್ಯಕಾಲೀನ ಭಾರತದಲ್ಲಿ ಹುಟ್ಟಿದ್ದರೆ ಬಹುಶಃ ಭರತ ಖಂಡ ಜಾತ್ಯತೀತ ರಾಷ್ಟ್ರವಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನ ತತ್ವ, ಆದರ್ಶಗಳು ಮೈಗೂಡಿಸಿಕೊಂಡು ಸಾಗಬೇಕು. ಸಿದ್ಧರಾಮೇಶ್ವರನ್ನು ಎಲ್ಲ ಸಮುದಾಯದವರು ಅರಾಧಿಸುತ್ತಾರೆ ಎಂದರು.
ಶಾಸಕ ಮಸಾಲ ಜಯರಾಮ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲ ಪಕ್ಷದವರಿಗೂ ನಮ್ಮ ಸಹಕಾರ ಇರಲಿದೆ. ಎಲ್ಲರೂ ಸೇರಿ ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸೋಣ. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡುವ ವೀರಶೈವ ಲಿಂಗಾಯಿತ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕೆ ₹10 ಲಕ್ಷ ನೀಡಲಾಗುವುದು’ ಎಂದರು.
ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾ ಸ್ವಾಮೀಜಿ, ಎಸ್.ಎಂ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಎಂ.ಬಿ.ನಂದೀಶ್, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಎಂ.ಸಿದ್ಧಲಿಂಗಪ್ಪ, ಮಹಾಸಭಾದ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ರೇಣುಕಪ್ರಸನ್ನ, ಯುವ ತಾಲ್ಲೂಕು ಅಧ್ಯಕ್ಷ ವೆಂಕಟಾಪುರ ಯೋಗಾನಂದ್, ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ, ಕಾರ್ಯಕಾರಿ ಸಮಮಿತಿ ಸದಸ್ಯ ಎಸ್.ಕೆ.ರಾಜಶೇಖರ್, ಲಿಂಗಾಯಿತ ನೌಕರರ ರಾಜ್ಯಾಧ್ಯಕ್ಷ ಎಂ.ಬಿ.ಶಿವಶಂಕರಪ್ಪ, ಕೆ.ಎಸ್.ಮಂಜುನಾಥ್, ಪುಪ್ಪಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.