ತುಮಕೂರು: ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಲು ವಿಫಲ ಯತ್ನ ನಡೆಸಿದ ಘಟನೆ ನಗರದ ಶಿರಾಗೇಟ್ ಸಮೀಪ ಶನಿವಾರ ನಡೆದಿದೆ.
ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಊಟ ಮುಗಿಸಿಕೊಂಡು ರಾತ್ರಿ 10.30ರ ವೇಳೆಗೆ ಶಿರಾ ಗೇಟ್ ಹಾಸಿಂಗ್ ಬೋರ್ಡ್ ಸಮೀಪದ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದಾಗ ತಲೆಗೆ ಬಟ್ಟೆ ಕಟ್ಟಿಕೊಂಡಿದ್ದ ದುಷ್ಕರ್ಮಿಯೊಬ್ಬ ಟಿವಿಎಸ್ ಬೈಕ್ನಲ್ಲಿ ಮಹಿಳೆಯನ್ನು ಹಿಂಬಾಲಿಸಿದ್ದಾನೆ.
ಹೀಗೇಕೆ ಹಿಂಬಾಲಿಸುತ್ತಿದ್ದಿಯಾ ಎಂದು ದೂರದಲ್ಲಿ ನಿಂತು ಪ್ರಶ್ನಿಸಿದ್ದಾರೆ. ಇದಕ್ಕೆ ಏನು ಉತ್ತರಿಸದ ದುಷ್ಕರ್ಮಿ ಏಕಾ ಏಕಿ ಬೈಕ್ನಲ್ಲಿ ವೇಗವಾಗಿ ಇವರಿದ್ದಲ್ಲಿಗೆ ಬಂದು ಸರ ಕಸಿಯಲು ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕಿರುಚಿದ್ದಾರೆ. ದುಷ್ಕರ್ಮಿ ಪರಾರಿಯಾಗಿದ್ದಾನೆ.
ನಂತರ ದೂರದಲ್ಲಿ ಮತ್ತೊಂದು ಬೈಕ್ನಲ್ಲಿದ್ದ ದುಷ್ಕರ್ಮಿಯ ಸ್ನೇಹಿತ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರಕ್ಕೆ ಬಂದಿದ್ದಾನೆ. ಆ ವೇಳೆಗೆ ಜನರು ಸ್ಥಳಕ್ಕೆ ಧಾವಿಸಿದ್ದನ್ನು ನೋಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.