ತುಮಕೂರು: ಕೃಷಿ ಇಲಾಖೆಯಿಂದ ಸಿರಿ ಧಾನ್ಯ ಮೇಳದ ಅಂಗವಾಗಿ ನಗರದಲ್ಲಿ ಸೋಮವಾರ ಸಿರಿ ಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜ. 5ರಿಂದ 7ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಸಿರಿ ಧಾನ್ಯ ಮೇಳ ಆಯೋಜಿಸಲಾಗಿದೆ. ಇದರ ಪ್ರಯುಕ್ತ ಸಿರಿ ಧಾನ್ಯಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾ ಅಶೋಕ ರಸ್ತೆ ಮೂಲಕ ಸಾಗಿ ಜೂನಿಯರ್ ಕಾಲೇಜು ಮೈದಾನದ ಬಳಿ ಕೊನೆಗೊಂಡಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ರೈತರು ಜಾಥಾದಲ್ಲಿ ಹೆಜ್ಜೆ ಹಾಕಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ನಗರದಲ್ಲಿ ಇನ್ನೊಂದು ವಾರದಲ್ಲಿ ಸಿರಿ ಧಾನ್ಯ ಮೇಳ ಆಯೋಜಿಸಲಾಗುವುದು. ಉತ್ತಮ ಆರೋಗ್ಯಕ್ಕಾಗಿ ಸಿರಿ ಧಾನ್ಯ ಬಳಸುವವರ ಮತ್ತು ಬೆಳೆಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು’ ಎಂದು ಹೇಳಿದರು.
ಸಿರಿ ಧಾನ್ಯಗಳಿಗೆ ಇರುವ ಶಕ್ತಿ ಯಾವ ಆಹಾರ ಪದಾರ್ಥಗಳಿಗೂ ಇಲ್ಲವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಸಿರಿ ಧಾನ್ಯ ಬಳಕೆ ಜಾಸ್ತಿಯಾಗಿದೆ. ಆದರೆ, ಸಿರಿ ಧಾನ್ಯ ಬೆಳೆಯುವ ವಿಸ್ತೀರ್ಣದ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ ಎಂದರು.
ಕೃಷಿ ಜಂಟಿ ನಿರ್ದೇಶಕ ರಮೇಶ್, ಕೃಷಿ ಉಪನಿರ್ದೇಶಕರಾದ ಅಶೋಕ್, ದೀಪಾಶ್ರೀ, ಸಹಾಯಕ ನಿರ್ದೇಶಕರಾದ ಅಶ್ವತ್ಥ ನಾರಾಯಣ, ಹನುಮಂತರಾಯಪ್ಪ, ಸಾವಯವ ಕೃಷಿಕ ಗೋವಿಂದರಾಜು ಮೊದಲಾದವರು ಪಾಲ್ಗೊಂಡಿದ್ದರು.