ಪಾವಗಡದಲ್ಲಿ ಸದಾ ಬಿಸಿಲು ಇರುತ್ತದೆ. ಆದರೆ ಈ ಬಾರಿ ಹೆಚ್ಚು ಮಳೆ ಬಿದ್ದು ಮೋಡ ಕವಿದ ವಾತಾವರಣ ಇರುವುದರಿಂದ ಇತ್ತೀಚೆಗೆ ಈ ರೋಗ ಕಂಡು ಬರುತ್ತಿದೆ ಎಂಬುದು ರೈತರ ವಿಶ್ಲೇಷಣೆ. ಈ ಬಗ್ಗೆ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಹೀರ್ ಬಾಷ ಪ್ರತಿಕ್ರಿಯಿಸಿ, ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ವಾತಾವರಣದಲ್ಲಿ ಬದಲಾವಣೆಯಾಗಿದೆ. ಹೀಗಾಗಿ ಬ್ಯಾಕ್ಟೀರಿಯಲ್ ಸ್ಪಾಟ್ ರೋಗ ಕಂಡು ಬರುತ್ತಿದೆ. ಇದು ಆರಂಭದಲ್ಲಿ ಬಿಳಿ ಬಣ್ಣದಲ್ಲಿದ್ದು ನಂತರ ಕಪ್ಪಾಗುತ್ತದೆ. ವಾತಾವರಣ ಸರಿಹೋದಲ್ಲಿ ರೋಗ ಕಡಿಮೆಯಾಗುತ್ತದೆ. ಆದರೆ ಈಗಾಗಲೇ ಗಿಡಗಳಿಗೆ ರೋಗ ಬಂದಿರುವುದರಿಂದ ಇತರೆ ಗಿಡಗಳಿಗೆ ವ್ಯಾಪಿಸದಂತೆ ತಡೆಯಲು ಔಷಧಿ ಸಿಂಪಡಿಸಬೇಕು ಎಂದರು.