ತುಮಕೂರು: ಖಾಸಗಿ ಬಸ್ಗಳನ್ನು ಓಡಿಸಲು ಅನುಕೂಲವಾಗುವಂತೆ ತುಂಬಾಡಿ ಮತ್ತು ಓಬಳಾಪುರ ಟೋಲ್ನಲ್ಲಿ ಶುಲ್ಕ ವಿನಾಯಿತಿ ನೀಡಬೇಕು ಎಂದು ಕೋರಿ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ಆ.5ರಂದು ಖಾಸಗಿ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿತ್ತು. ಮಧುಗಿರಿಯಿಂದ ತುಮಕೂರಿಗೆ ಹೋಗಿ ಬರಲು ತುಂಬಾಡಿ ಮತ್ತು ಓಬಳಾಪುರದ ಟೋಲ್ನಲ್ಲಿ ಶುಲ್ಕ ಪಾವತಿಸಬೇಕು. ಈ ಶುಲ್ಕ ದುಬಾರಿ ಆಗುತ್ತಿದೆ. ಸಂಸದರು ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದಾರೆ’ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಶಂಕರ ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದೆರಡು ದಿನಗಳಲ್ಲಿ ಖಾಸಗಿ ಬಸ್ಗಳು ಯಾವಾಗ ಸಂಚರಿಸಲಿವೆ ಎನ್ನುವುದು ಖಚಿತವಾಗುತ್ತದೆ. ನಿತ್ಯ ತುಮಕೂರು– ಮಧುಗಿರಿ ಮಾರ್ಗದಲ್ಲಿ 500 ಬಸ್ಗಳು ಸಂಚರಿಸುತ್ತವೆ. ಚಾಲಕರು, ನಿರ್ವಾಹಕರು, ಕ್ಲೀನರ್ ಸೇರಿದಂತೆ 6000 ಸಾವಿರ ಜನರು ಖಾಸಗಿ ಬಸ್ ವಲಯದಲ್ಲಿ ದುಡಿಯುತ್ತಿದ್ದಾರೆ’ ಎಂದರು.
ಕುಣಿಗಲ್ ಮಾರ್ಗದಲ್ಲಿ ಆರಂಭ
ಕುಣಿಗಲ್– ತುಮಕೂರು ನಡುವಿನ ಖಾಸಗಿ ಬಸ್ಗಳ ಸಂಚಾರ ಸೋಮವಾರದಿಂದ ಪುನರಾರಂಭವಾಯಿತು.
ಈ ಮಾರ್ಗದಲ್ಲಿ ಯಾವುದೇ ಟೋಲ್ಗಳು ಇಲ್ಲ. ಇದರಿಂದ ಈ ವಲಯದಲ್ಲಿ ಬಸ್ಗಳ ಸಂಚಾರ ಆರಂಭವಾಗಿದೆ. ಈ ಮಾರ್ಗದಲ್ಲಿ ಬೆಳಿಗ್ಗೆಯಿಂದ 12 ಖಾಸಗಿ ಬಸ್ಗಳು ಸಂಚಾರಿಸಿದವು. ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಬಸ್ನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಅಂತರ ಕಾಯ್ದುಕೊಳ್ಳಲಾಗಿತ್ತು. ಈ ಮಾರ್ಗದಲ್ಲಿ ಹೆಚ್ಚಿನ ಜನರು ಖಾಸಗಿ ಬಸ್ ಸಂಚಾರ ಅವಲಂಬಿಸಿದ್ದಾರೆ.