ತುಮಕೂರು: ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಕಾರ್ಮಿಕ ಕಾನೂನು ಮೊಟಕುಗೊಳಿಸಿ ಕಾರ್ಮಿಕರನ್ನು 12 ಗಂಟೆ ದುಡಿಮೆಗೆ ದೂಡುತ್ತಿದೆ ಎಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಕಂಬೇಗೌಡ ಆರೋಪಿಸಿದರು.
ನಗರದಲ್ಲಿ ಬುಧವಾರ ಎಐಟಿಯಸಿ ವತಿಯಿಂದ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₹31,500 ಕೂಲಿ ನಿಗದಿ ಪಡಿಸಿ, ಸಾಮಾಜಿಕ ನ್ಯಾಯ ಒದಗಿಸಬೇಕು. ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರು ನಿರಂತರ ಹೋರಾಟದಿಂದ ಗಳಿಸಿದ್ದ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳಗಾರರಿಗೆ ಅನುವು ಮಾಡಿಕೊಟ್ಟಿದೆ. ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಟಿಯುಸಿ ಕಾರ್ಯಾಧ್ಯಕ್ಷ ಗಿರೀಶ್, ‘ಅಸಂಘಟಿತ ಕಾರ್ಮಿಕರು ಯಾವುದೇ ಸಾಮಾಜಿಕ ಭದ್ರತೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. 12 ದುಡಿಸಿಕೊಂಡು 8 ಗಂಟೆಯ ವೇತನ ನೀಡುತ್ತಿರುವುದು ಖಂಡನೀಯ. ಸರ್ಕಾರ ಎಚ್ಚರವಹಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಚಂದ್ರಶೇಖರ್, ಖಜಾಂಚಿ ರವಿಪ್ರಸಾದ್, ಮುಖಂಡರಾದ ಅಶ್ವತ್ಥನಾರಾಯಣ, ಲಕ್ಷ್ಮಿಪತಿ, ರಮೇಶ್, ರಾಮಚಂದ್ರ, ದೊಡ್ಡತಿಮ್ಮಯ್ಯ, ವನಜಾಕ್ಷಿ ಇತರರು ಉಪಸ್ಥಿತರಿದ್ದರು.