ತುಮಕೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸರಳ, ಸಜ್ಜನ, ಕ್ರೀಯಾಶೀಲ ರಾಜಕಾರಣಿಯಾಗಿರುವ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಬೆಂಬಲವಾಗಿ ಕ್ರೈಸ್ತ ಸಮುದಾಯ ನಿಲ್ಲಲಿದೆ ಎಂದು ಸಿಎಸ್ಐ ವಲಯದ ಮುಖ್ಯಸ್ಥ ಫಾದರ್ ರೆವರೆಂಡ್ ಮನೋಜ್ ಕುಮಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಕ್ರೈಸ್ತ ಸಮುದಾಯದ ಮುಖಂಡರನ್ನು ಮುದ್ದಹನುಮೇಗೌಡ ಭೇಟಿಯಾಗಿ ಮಾತುಕತೆ ನಡೆಸಿದ ಸಮಯದಲ್ಲಿ ಅವರು ಈ ಭರವಸೆ ನೀಡಿದರು.
ಹಿಂದೆ ಸಂಸದರಾಗಿದ್ದಾಗ ಕ್ರೈಸ್ತ ಸುಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಈ ಬಾರಿ ಗೌಡರನ್ನು ಬೆಂಬಲಿಸಲು ಸಭಾ ಪಾಲನಾ ಸಮಿತಿಗಳ ತೀರ್ಮಾನವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ‘ಕ್ರೈಸ್ತ ಸಮುದಾಯವು ಬಡವರು, ನೊಂದವರು, ಶೋಷಿತರಿಗೆ ಆಶ್ರಯ ನೀಡಿದೆ. ಇಂತಹ ಸಮುದಾಯದ ಮೇಲು ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಇದರ ಹಿಂದಿನ ಶಕ್ತಿ ಯಾರು ಎಂಬುದನ್ನು ನಾವೆಲ್ಲರು ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕಿದೆ’ ಎಂದು ಮನವಿ ಮಾಡಿದರು.
‘ನನಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು. ಆದರೆ ಕೆಟ್ಟದನ್ನು ಮಾಡಿಲ್ಲ. ಎಲ್ಲಾ ಸಮುದಾಯದ ಜತೆ ಬೆರೆತು ಕೆಲಸ ಮಾಡಿದ್ದೇನೆ. ಮತ್ತೊಂದು ಬಾರಿ ಅವಕಾಶ ಮಾಡಿಕೊಟ್ಟರೆ ನಿಮ್ಮಗಳ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೆನೆ’ ಎಂದು ಭರವಸೆ ನೀಡಿದರು.
ವಿವಿಧ ದೇವಾಲಯಗಳ ಸಭಾ ಪಾಲಕರಾದ ಮಾರ್ಗನ್ ಸಂದೇಶ್, ಸುಧೀರ್, ಎಲಿಜಬೇತ್, ಸ್ಯಾಮುಯೆಲ್ ಪ್ರದೀಪ್, ಮಿಥುನ್ ಕುಮಾರ್, ಮುಖಂಡರಾದ ಸಂಜೀವ್ ಕುಮಾರ್, ಸುಜಾತ, ಸತ್ಯಮೂರ್ತಿ ಮೊದಲಾದವರು ಹಾಜರಿದ್ದರು.