ತುಮಕೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಮಿತಿ ಶನಿವಾರ ಮುಗಿದಿದ್ದು, ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಕೊಬ್ಬರಿ ಖರೀದಿಗೆ ಮಾರ್ಚ್ 4ರಿಂದ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು.
ಜಿಲ್ಲೆಗೆ ನಿಗದಿಪಡಿಸಿದ್ದ ಖರೀದಿ ಪ್ರಮಾಣವನ್ನು ಇತರೆ ಜಿಲ್ಲೆಗಳ ರೈತರು ಬಳಸಿಕೊಂಡಿದ್ದರಿಂದ ಜಿಲ್ಲೆಯ ಏಳು ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿ ಕಡಿಮೆಯಾಗಿದೆ. ಜಿಲ್ಲೆಯ ನಿಗದಿತ ಮಿತಿ ತಲುಪುವ ಮುನ್ನವೇ ನೋಂದಣಿ ಪ್ರಕ್ರಿಯೆ ಕೊನೆಗೊಂಡಿದೆ.
ಬೆಳಿಗ್ಗೆಯಿಂದ ವಿವಿಧ ಕೊಬ್ಬರಿ ಕೇಂದ್ರಗಳ ಬಳಿ ಸರದಿ ಸಾಲಿನಲ್ಲಿ ನಿಂತಿದ್ದ ರೈತರು ನೋಂದಣಿ ಸಾಧ್ಯವಾಗದೆ ನಿರಾಸೆಯಿಂದ ಮನೆಗೆ ತೆರಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 6,92,500 ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಶನಿವಾರ ಮಧ್ಯಾಹ್ನ ಇಷ್ಟು ಪ್ರಮಾಣದ ಕೊಬ್ಬರಿ ನೋಂದಣಿ ಮುಗಿದ ಕೂಡಲೇ ಪ್ರಕ್ರಿಯೆ ನಿಲ್ಲಿಸಲಾಗಿದೆ.
ಜಿಲ್ಲೆಗೆ 3.25 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. 27,212 ರೈತರು 3,17,917 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.