ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ನಿರುವಗಲ್ಲು ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಗ್ರಾಮದ ಮಧು ಎಂಬಾತ ತನ್ನ ಸಹಚರರ ಜತೆ ನಿರುವಗಲ್ಲು ಸಮೀಪದ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ. ಆ ಮರಳನ್ನು ಪಕ್ಕದ ಜಮೀನಿನಲ್ಲಿ ಶೇಖರಿಸಿ ಲಾರಿಗೆ ತುಂಬಿಸಿ ಸಾಗಣೆ ಮಾಡುತ್ತಿದ್ದ.
ಚಿಕ್ಕನಾಯಕನಹಳ್ಳಿ ಸಿಪಿಐ ಎಸ್.ಎಂ.ವೀಣಾ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದರು. ಈ ಸಮಯದಲ್ಲಿ ಲಾರಿಗೆ ಮರಳನ್ನು ಅಕ್ರಮವಾಗಿ ತುಂಬಿಸುತ್ತಿದ್ದವರು ಓಡಿ ಹೋಗಿದ್ದಾರೆ.
ಸ್ಥಳದಲ್ಲಿದ್ದ ಮರಳು ತುಂಬಿದ ಒಂದು ಟಿಪ್ಪರ್ ಲಾರಿ, ಒಂದು ಜೆಸಿಬಿ, ಮೂರು ದ್ವಿಚಕ್ರ ವಾಹನ, ಶೇಖರಣೆ ಮಾಡಿದ್ದ ಎರಡು ಟ್ರಾಕ್ಟರ್ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಪಿಎಸ್ಐಗಳಾದ ಶ್ರೀಕಾಂತ್, ನರಸಿಂಹಮೂರ್ತಿ, ಎಎಸ್ಐ ಪ್ರಕಾಶ್, ಸಿಬ್ಬಂದಿ ನಾಗಭೂಷಣ್, ದಕ್ಷಿಣಮೂರ್ತಿ, ಗಿರೀಶ, ಜಿಲಾನಿ, ಉಮಾಶಂಕರ, ಕಿರಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.