ಕುಣಿಗಲ್: ತಾಲ್ಲೂಕಿನ ಎಡೆಯೂರು ದಾಸೋಹದ ಮಹಾಮನೆಯಲ್ಲಿ ಭಾನುವಾರ ದಾವಣಗೆರೆ ಭಕ್ತವೃಂದದಿಂದ ಭಕ್ತರಿಗೆ ಬಿಸಿಬಿಸಿ ದಾವಣಗೆರೆಯ ಬೆಣ್ಣೆದೋಸೆ ಸೇವೆ ನಡೆಯಿತು. ನೂರಾರು ಭಕ್ತರು ಬೆಣ್ಣೆ ದೋಸೆ ಸವಿದು ತೃಪ್ತರಾದರು.
ದಾವಣಗೆರೆಯ ಪುಟ್ಟರಾಜು ಗವಾಯಿ ಆಶ್ರಮದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವಮೂರ್ತಿಸ್ವಾಮಿ ಮತ್ತು ಸಹ ಕಾರ್ಯದರ್ಶಿ ಜಿ. ಕರಿಬಸಪ್ಪ ತಂಡದವರು, ಕಳೆದ ಎರಡುವರ್ಷದಿಂದ ಧನರ್ಮಾಸದ ವಿಶೇಷ ದಿನದಂದು ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದ ಭಕ್ತರಿಗೆ ದಾವಣಗೆರೆಯ ಬೆಣ್ಣೆ ದೋಸೆ ರುಚಿ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿದ್ದಾರೆ.
ದಾವಣಗೆರೆಯಿಂದಲೇ ಬೆಣ್ಣೆ, ದೋಸೆಗೆ ಬೇಕಾದ ಸಾಮಗ್ರಿಗಳು, ಬಾಣಸಿಗರ ಕರೆತಂದು ದೋಸೆ ಸಿದ್ಧಪಡಿಸಿ ಬೆಳಗಿನ ತಿಂಡಿಗೆ ಭಕ್ತರಿಗೆ ದಾವಣಗೆರೆ ಬೆಣ್ಣೆದೋಸೆ ಹಂಚುತ್ತಿದ್ದಾರೆ. ಭಾನುವಾರ ಬೆಳ್ಳಗೆ ದಾಸೋಹ ಮಹಾಮನೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಬೆಣ್ಣೆ ದೋಸೆ ಸವಿದರು.
ದಾವಣಗೆರೆಯ ಟಿ.ಕೆ.ಕರಿಬಸವಯ್ಯ ಸಹ ಮಧ್ಯಾಹ್ನದ ಊಟಕ್ಕೆ 2 ಸಾವಿರ ಭಕ್ತರಿಗೆ ಮೆಣಸಿನಕಾಯಿ ಬಜ್ಜಿ ಹಂಚಿ ತಮ್ಮ ಸೇವೆ ಸಮರ್ಪಿಸಿದರು.