ತುಮಕೂರು: 12 ವರ್ಷಕ್ಕೆ ಒಮ್ಮೆ ನಡೆಯುವ ದೇವರಾಯನದುರ್ಗ ಭೋಗನರಸಿಂಹಸ್ವಾಮಿ ವಿಶೇಷ ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನಾನುಕೂಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ದೇವರಾಯನದುರ್ಗದಲ್ಲಿ ಫೆ.13ರಿಂದ ಕುಂಭಾಭಿಷೇಕ ಕಾರ್ಯಕ್ರಮ ಆರಂಭಗೊಳ್ಳುವುದರಿಂದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ದೇವರ ಮೇಲೆ ನನಗೆ ಅಪಾರ ಭಕ್ತಿ ಇದೆ. ಈ ಬಾರಿ ಸ್ವಾಮಿಯ ಸೇವೆ ಮಾಡುವ ಭಾಗ್ಯ ನನಗೆ ದೊರೆತಿದೆ. ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಯಾರೊಬ್ಬರಿಗೂ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಸುಮಾರು ₹11.82 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಾಗೇಪಲ್ಲಿ-ಹಲಗೂರು- ದೇವರಾಯನದುರ್ಗ ರಸ್ತೆ, ತುಮಕೂರು ರಾಷ್ಟ್ರೀಯ ಹೆದ್ದಾರಿ 94ರಿಂದ ದೇವರಾಯನದುರ್ಗ ಪ್ರವಾಸಿ ಮಂದಿರ ರಸ್ತೆ, ತುಮಕೂರು ಜಿಲ್ಲಾ ಮುಖ್ಯರಸ್ತೆಯಿಂದ ದೇವರಾಯನದುರ್ಗ ರಸ್ತೆ, ಊರ್ಡಿಗೆರೆ ರಸ್ತೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತ್ಕುಮಾರ್, ಯುವ ಘಟಕದ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಬೈರೇಗೌಡ, ಗುತ್ತಿಗೆದಾರ ಸೋಮಶೇಖರ್, ದೇವಾಲಯದ ಆಗಮಿಕರು, ಗ್ರಾ,ಪಂ.ಸದಸ್ಯ ಯಲ್ಲಪ್ಪ, ಐ.ಟಿ.ವಿಭಾಗದ ಅಧ್ಯಕ್ಷ ಮಂಜುನಾಥ್ ಗೌಡ ಇದ್ದರು.
*
ಕುಡಿಯುವ ನೀರು ಪೂರೈಕೆಗಾಗಿ ₹22 ಲಕ್ಷದಲ್ಲಿ ಒವರ್ಹೆಡ್ ಟ್ಯಾಂಕ್, ₹80 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. -ಡಿ.ಸಿ.ಗೌರಿಶಂಕರ್, ಶಾಸಕ