ಪಾವಗಡ: ಕಾಡುಗೊಲ್ಲ ಜನಾಂಗಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಿದಲ್ಲಿ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ಹೇಳಿದರು.
ತಾಲ್ಲೂಕಿನ ಆಲದ ಮರದ ಹಟ್ಟಿಯಲ್ಲಿ ಶನಿವಾರ ಕಾಡುಗೊಲ್ಲರ ಸಂಘ ಆಯೋಜಿಸಿದ್ದ ‘ಕಾಡುಗೊಲ್ಲರ ನಡೆ ಎಸ್ಟಿ ಮೀಸಲಾತಿ ಕಡೆ’ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಡುಗೊಲ್ಲ ಜನಾಂಗಕ್ಕೆ ಎಸ್ಟಿ ಮೀಸಲಾತಿ ನೀಡಿದಲ್ಲಿ ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಉದ್ಯೋಗದಲ್ಲಿ ಮೀಸಲಾತಿ ಸಿಗುವುದರಿಂದ ಬಡ ಕುಟುಂಬಗಳು ಏಳಿಗೆಯಾಗುತ್ತದೆ ಎಂದರು.
ಗೌರವಾಧ್ಯಕ್ಷ ಸಣ್ಣಯ್ಯ, ಜನಾಂಗದ ಮಹಿಳೆಯರು ಮೌಢ್ಯತೆಯಿಂದ ಹೊರ ಬಂದು ಶಿಕ್ಷಣ ಪಡೆಯಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಕಾಡುಗೊಲ್ಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬೋರಪ್ಪ, ಸರ್ಕಾರಕ್ಕೆ ಮೀಸಲಾತಿ ಹೆಚ್ಚಿಸುವಂತೆ ಈಗಾಗಲೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಂತ್ರಿಕ ದೋಷಗಳನ್ನು ಬಗೆಹರಿಸಿ ಶೀಘ್ರ ಎರಡೂ ಸರ್ಕಾರಗಳು ಮೀಸಲಾತಿ ನೀಡಬೇಕು. ಜನಾಂಗ ಸಂಘಟನೆಯತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಜುಂಜಪ್ಪನ ಗಣೆ ಪದ, ಸೋಬಾನ ಪದ, ಕೋಲಾಟ ಇತ್ಯಾದಿ ಜನಪದ ಕಾರ್ಯಕ್ರಮ ನಡೆಯಿತು.
ಉಪನ್ಯಾಸಕ ಡಾ.ಕಂಪ್ಲಪ್ಪ, ರಮೇಶ್, ಚಿಕ್ಕಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಣ್ಣ, ತಿಪ್ಪಯ್ಯ, ಚಿಕ್ಕಣ್ಣ, ವೀರ್ಲಗೊಂದಿ ತಮ್ಮಣ್ಣ, ಚಿತ್ತಪ್ಪ, ಶಿವಣ್ಣ, ದೊಡ್ಡಯ್ಯ, ವೀರಭದ್ರಪ್ಪ, ರಾಮಪ್ಪ ಇದ್ದರು.