ತುಮಕೂರು: ಇಲ್ಲಿನ ಇಸ್ಮಾಯಿಲ್ ನಗರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ 64ನೇ ವರ್ಷದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಕೊಳೆಗೇರಿ ಸಮಿತಿ ಗೌರವಾಧ್ಯಕ್ಷರಾದ ದೀಪಿಕಾ, ಅಂಬೇಡ್ಕರ್ ಅವರು ಎಲ್ಲ ಸಮುದಾಯಗಳ ಆಸ್ತಿ. ಎಲ್ಲರಿಗೂ ಸಂವಿಧಾನದ ಅಡಿಯಲ್ಲಿ ಸಮಪಾಲು ಸಮಬಾಳು ಆಶಯವನ್ನು ನೀಡಿದ್ದಾರೆ ಎಂದರು.
ಅಂಬೇಡ್ಕರ್ ಅವರು ಹೇಳಿರುವ ಶಿಕ್ಷಣ, ಸಂಘಟನೆ, ಹೋರಾಟದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.
ಸಮಿತಿ ಕಾರ್ಯದರ್ಶಿ ಅರುಣ್, ಪರಿನಿರ್ವಾಣ ದಿನದ ವೇಳೆ ತಮ್ಮ ಮಕ್ಕಳಿ ಶಿಕ್ಷಣ ದೊರಕಿಸಿಕೊಡುತ್ತೇವೆ ಎನ್ನುವ ಸಂಕಲ್ಪವನ್ನು ಪೋಷಕರು ಮಾಡಬೇಕು. ಶೋಷಿತರು ರಾಜಕೀಯ ಪಕ್ಷಗಳ ಗುಲಾಮರಾಗದೆ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದರು.
ಇಲ್ಲಿನ 40 ಕುಟುಂಬಗಳ ಹೆಣ್ಣು ಮಕ್ಕಳ ಘನತೆಯ ಬದುಕಿಗೆ ಅಗತ್ಯವಿರುವ ಸಮುದಾಯ ಶೌಚಾಲಯವನ್ನು ನಿರ್ಮಿಸಿಕೊಡುವಲ್ಲಿ ತುಮಕೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.
ಹಂದಿಜೋಗಿ ಕೊಳೆಗೇರಿ ಶಾಖೆ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಗಂಗಮ್ಮ, ರಾಮಕ್ಕ, ಗೋವಿಂದ ಹಾಗೂ ತುಮಕೂರು ಕೊಳೆಗೇರಿ ಸಮಿತಿಯ ತಿರುಮಲಯ್ಯ, ಧನಂಜಯ್, ಹನುಮಂತ ಪಾಲ್ಗೊಂಡಿದ್ದರು.