ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶಿಕ್ಷಣ ನೀತಿ ರೂಢಿಸಿಕೊಳ್ಳಿ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಸಲಹೆ
Last Updated 5 ಸೆಪ್ಟೆಂಬರ್ 2021, 16:38 IST
ಅಕ್ಷರ ಗಾತ್ರ

ತುಮಕೂರು: ‘ಪ್ರತಿಯೊಬ್ಬ ಶಿಕ್ಷಕರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಢಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು’ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುವ ಮಹತ್ವಾ ಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣ ಅಡಗಿದೆ. ಕಲಿಕೆಯ ಚಿತ್ರಣವನ್ನೇ ಬದಲಿಸಿ, ಶಿಕ್ಷಣವನ್ನು ಸಮಗ್ರವಾಗಿಸಿ ಸ್ವಾವಲಂಬಿ ಭಾರತ ಕಟ್ಟಲು, ಗಟ್ಟಿ ಅಡಿಪಾಯ ಹಾಕಲು ಇದು ಸಹಕಾರಿ ಎಂದರು.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಅಜ್ಞಾನವೆಂಬ ಅಂಧಕಾರ ದ ಕತ್ತಲು ಹೊಡೆದೋಡಿಸಿ, ವಿದ್ಯೆ ಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿಯೇ ಗುರು. ಸಮಾಜಕ್ಕೆ ಶಿಕ್ಷ ಕರ ಕೊಡುಗೆ ಅನನ್ಯ ಎಂದರು.

ಶಿಕ್ಷಕರ ಜವಾಬ್ದಾರಿ ನೌಕರಿಗೆ ಮಾತ್ರ ಸೀಮಿತವಾಗಬಾರದು. ಸಮಾಜ ಕಟ್ಟುವ ಕಾಯಕವೂ ಆಗಬೇಕು. ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಬೇಕು. ಶಿಸ್ತು, ಸಂಯಮದಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಶಿಕ್ಷಕ ಹಾಗೂ ವೈದ್ಯ ವೃತ್ತಿ ಶ್ರೇಷ್ಠವಾದದ್ದು. ಇದರಲ್ಲಿ ಸಮಾಜಕ್ಕೆ ಶಿಕ್ಷಕರ ಕೊಡುಗೆ ಅನನ್ಯ. ತುಮಕೂರು ಜಿಲ್ಲೆಯಿಂದ ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜ್ ಮಾತನಾಡಿ, ನಗರದಲ್ಲಿ ಗುರು ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹50 ಲಕ್ಷ ಬಿಡುಗಡೆಯಾಗಿದೆ. ಸರ್ಕಾರಿ ನೌಕರರ ಭವನದ ನೀಲನಕ್ಷೆ ಸಿದ್ಧವಾಗಿದ್ದು, ಶೀಘ್ರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಮಾತನಾಡಿದರು.

ಡಯಟ್ ಪ್ರಾಂಶುಪಾಲ ಮಂಜು ನಾಥ್, ಪ್ರಾ.ಶಾ.ಶಿ.ಸಂಘದ ಉಪಾಧ್ಯಕ್ಷ ಜಿ.ಆರ್. ಜಯರಾಮ್, ಸಹ ಕಾರ್ಯದರ್ಶಿ ರಾಜಶೇಖರ್, ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟದ ಅಧ್ಯಕ್ಷ ಡಾ. ಹಾಲನೂರು ಲೇಪಾಕ್ಷಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ತಾಲ್ಲೂಕು ಅಧ್ಯಕ್ಷ ತಿಮ್ಮೇಗೌಡ, ದೈ.ಶಿ.ಶಿ. ಸಂಘದ ಅಧ್ಯಕ್ಷ ಶಂಕರ್ ಲಿಂಗಪ್ಪ, ಚಿತ್ರಕಲಾ ಶಿ.ಸಂಘದ ಅಧ್ಯಕ್ಷ ರವೀಶ್, ಬಿಇಒ ಹನುಮಾನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT