ತುಮಕೂರು: ನಗರದಲ್ಲಿ ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿರುವ ನಾರಾಯಣ ದೇವಾಲಯ ಆಸ್ಪತ್ರೆಯಲ್ಲಿ ಈವರೆಗೆ 1,900ಕ್ಕೂ ಹೆಚ್ಚು ಬಡ ಜನರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ನಾರಾಯಣ ದೇವಾಲಯದ ಮುಖ್ಯಸ್ಥ ಡಾ.ನರೇಶ್ ಶೆಟ್ಟಿ ಇಲ್ಲಿ ಗುರುವಾರ ಹೇಳಿದರು.
ನಗರದ ರಿಂಗ್ ರಸ್ತೆಯಲ್ಲಿ ಆಸ್ಪತ್ರೆ ಸ್ಥಾಪಿಸಿ ಒಂದು ವರ್ಷವಷ್ಟೇ ಕಳೆದಿದ್ದು, ಬಡವರಿಗೆ ಉಚಿತವಾಗಿ ನೇತ್ರ ಪರೀಕ್ಷೆ, ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಆಸ್ಪತ್ರೆಯು ಬಿಲ್ಲಿಂಗ್ ಕೌಂಟರ್ ಇಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೇತ್ರತಜ್ಞ ಡಾ.ಕೆ.ಭುಜಂಗಶೆಟ್ಟಿ ಅವರು ಗ್ರಾಮೀಣ ಪ್ರದೇಶದ ಬಡವರಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆ ಸ್ಥಾಪಿಸಿದ್ದಾರೆ. ವಿವಿಧ ನೇತ್ರ ಸಮಸ್ಯೆಗಳಿಂದ ಬಳಲುತ್ತಿದ್ದ 228 ಮಕ್ಕಳನ್ನು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಅತ್ಯಾಧುನಿಕವಾದ ಮೂರು ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಆಸ್ಪತ್ರೆ ಹೊಂದಿದ್ದು, ಅನುಭವಿ ಹಾಗೂ ನುರಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಕರು ಶಸ್ತ್ರ ಚಿಕಿತ್ಸೆಗಳನ್ನು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆ ಸಿಇಒ ಎಸ್.ಕೆ.ಮಿತ್ತಲ್ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.