ತುಮಕೂರು: ನಗರದ ಹೊರವಲಯದ ಅಜ್ಜಗೊಂಡನಹಳ್ಳಿ ಯಲ್ಲಿರುವ ಪಾಲಿಕೆಯ ಕಸಸುರಿಯುವ 40 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಹಂದಿ ಸಾಕಾಣಿಕೆ ಹಾಗೂ ಹಂದಿಗಳನ್ನು ಮೇಯಿಸಲು 4 ಎಕರೆ ಜಾಗ ನೀಡಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ.
ಮೇಯರ್ ಮೇಯರ್ ಫರೀದಾ ಬೇಗಂ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಹಂದಿ ಸಾಕಾಣಿಕೆದಾರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚೆಗೆ ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿ ಹೆಚ್ಚಿದೆ. ಇದರಿಂದ ಅಪಘಾತಗಳಾಗುತ್ತಿವೆ. ನಾಗರಿಕರು ಅಪಘಾತಗಳಿಗೆ ಒಳಗಾಗಿ ಸಂಕಷ್ಟ ಎದುರಿಸುವಂತಾಗಿದೆ. ನಾಗರಿಕ ಸಮಿತಿಗಳು, ಮಹಾನಗರ ಪಾಲಿಕೆ ಸದಸ್ಯರ ದೂರುಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹಂದಿ ಸಾಕುವವರ ಸಭೆ ಕರೆಯಲಾಗಿತ್ತು. ಅಜ್ಜಗೊಂಡನಹಳ್ಳಿಯಲ್ಲಿ 24x7 ನೀರಿನ ವ್ಯವಸ್ಥೆ, ವಿದ್ಯುತ್, ಭದ್ರತೆ ಸಹ ನೀಡಲು ಪಾಲಿಕೆ ಸಿದ್ಧವಿದೆ ಎಂದು ಮೇಯರ್ ಮತ್ತು ಆಯುಕ್ತರು ಭರವಸೆ ನೀಡಿದರು.
ಹಂದಿಜೋಗಿಗಳಿಗೆ ಅಣ್ಣೇನಹಳ್ಳಿ ಯಲ್ಲಿ ಸರ್ಕಾರವು ಗುರುತಿಸಿರುವ ಜಾಗದಲ್ಲಿ ಶಾಶ್ವತ ನೆಲೆ ಕಲ್ಪಿಸಿ ಎಂದು ಹಂದಿ ಜೋಗಿ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರಾಮಕ್ಕ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಶಾಶ್ವತ ನೆಲೆ ಕಲ್ಪಿಸಲು ಪಾಲಿಕೆಗೆ ಅಧಿಕಾರವಿಲ್ಲ. ಆ ಅಧಿಕಾರ ಇರುವುದು ಜಿಲ್ಲಾಧಿಕಾರಿಗೆ ಮಾತ್ರ ಎಂದು ಹೇಳಿದರು.
ಉಪಮೇಯರ್ ಶಶಿಕಲಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಟಿ.ಎಂ.ಮಹೇಶ್, ನಯಾಜ್ ಅಹಮದ್, ಎಸ್.ಮಂಜುನಾಥ್, ಜೆ.ಕುಮಾರ್, ಶಿವರಾಮು, ವಿಷ್ಣುವರ್ಧನ್, ಸುಧೀಶ್ವರ್, ಡಿವೈಎಸ್ಪಿ ತಿಪ್ಪೇಸ್ವಾಮಿ, ಡಾ.ನಾಗೇಶ್ಕುಮಾರ್, ಗೋಪಿ, ಅರ್ಜುನ್, ಸುರೇಶ್ ಇದ್ದರು.