ಪಾವಗಡ: ತಾಲ್ಲೂಕಿನ ನೀಲಮ್ಮನಹಳ್ಳಿ ಬಳಿಯ ಹೂವಿನ ತೋಟ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಅನಂತರಾಮು ಅವರು ಸುಮಾರು 4 ಎಕರೆಯಲ್ಲಿ ಚಂಡು ಹೂವು ನಾಟಿ ಮಾಡಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಉತ್ತಮ ಬೆಳೆ ಬಂದಿದೆ. ಇದು ವೈ ಎನ್ ಹೊಸಕೋಟೆ- ಪಾವಗಡ ಮಾರ್ಗದಲ್ಲಿ ಸಂಚರಿಸುವವರ ಕಣ್ಮನವನ್ನು ಸೆಳೆಯುತ್ತಿದೆ.
ಈ ಮಾರ್ಗದಲ್ಲಿ ಸಂಚರಿಸುವವರು ತೋಟಕ್ಕೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮದುವೆ, ನಿಶ್ಚಿತಾರ್ಥದ ಫೋಟೊ ಶೂಟ್ಗಾಗಿ ತೋಟಕ್ಕೆ ಮುಗಿಬೀಳುತ್ತಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಗ್ರಾಮಗಳಿಗೆ ಬರುವವರಿಗೆ ತೋಟ ನೆಚ್ಚಿನ ತಾಣವಾಗಿದೆ.
ತಾಲ್ಲೂಕಿನ ನಿಡಗಲ್ ಹೋಬಳಿಯ ಬ್ಯಾಡನೂರು, ಗೊಲ್ಲರಹಟ್ಟಿ ಇತರೆಡೆ ಕೇವಲ 1 ರಿಂದ 2 ಕುಂಟೆಯಷ್ಟು ಪ್ರದೇಶದಲ್ಲಿ ಮಾತ್ರ ಚಂಡು ಹೂವು ಬೆಳೆಯಲಾಗಿದೆ. ಇಲ್ಲಿ ವಿಶಾಲ ಪ್ರದೇಶದಲ್ಲಿ ಬೆಳೆ ಇರುವುದರಿಂದ ಸುಂದರವಾಗಿದೆ ಎಂದು ರೈತರು ಹೇಳುತ್ತಾರೆ.
‘30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ. ಸುಮಾರು ₹2 ಲಕ್ಷ ಖರ್ಚಾಗಿದೆ. ಕೆ.ಜಿ.ಗೆ ₹100 ಸಿಗುತ್ತಿತ್ತು. ಮಳೆ ಬೀಳುತ್ತಿರುವುದರಿಂದ ₹ 65ರಂತೆ ಮಾರಾಟ ಮಾಡಲಾಗಿದೆ ಎಂದು ರೈತ ಅನಂತರಾಮು ತಿಳಿಸಿದರು.
‘ಕೃತಕ ಸೀನರಿಗಿಂತಲೂ ನೈಸರ್ಗಿಕವಾಗಿರುವ ಹೂವಿನ ತೋಟದಲ್ಲಿ ಫೊಟೊ ಶೂಟ್ ಮಾಡಿಸಿದರೆ ಉತ್ತಮ. ಹೀಗಾಗಿ ಹೂವಿನ ತೋಟದಲ್ಲಿ ಫೊಟೊ ಶೂಟ್ ಮಾಡಿಸಲಾಗುತ್ತಿದೆ. ತೋಟದ ಮಾಲೀಕರು ಯಾವುದೇ ಶುಲ್ಕ ಪಡೆಯದೆ ಸಹಕಾರ ನೀಡುತ್ತಿದ್ದಾರೆ’ ಎಂದು ನವ ವಿವಾಹಿತ ಸಂತೋಷ್ ಸಂತಸ ವ್ಯಕ್ತಪಡಿಸಿದರು.