ಗುಬ್ಬಿ: ತಾಲ್ಲೂಕಿನಲ್ಲಿ ಬಹುತೇಕ ಕುಟುಂಬಗಳು ಹೂವು, ಹಣ್ಣು, ತರಕಾರಿ, ಸೊಪ್ಪು, ಸೌತೆಕಾಯಿ, ವಿಳ್ಯದ ಎಲೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು, ಮಾರಿ ಜೀವನ ಸಾಗಿಸುತ್ತಿದ್ದವು. ಆದರೆ ಕೊರೊನಾ ಸೋಂಕಿನ ಪರಿಣಾಮ ಬೆಳೆದ ವಸ್ತುಗಳು ಜಮೀನಿನಲ್ಲಿಯೇ ಉಳಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಅಧಿಕ ಲಾಭಗಳಿಸುವ ಕಾತುರದಲ್ಲಿದ್ದ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯವರ್ತಿಗಳು ರೈತರ ಬಳಿ ‘ಕೊರೊನಾದಿಂದ ಯಾರು ಕೊಂಡುಕೊಳ್ಳುವುದಿಲ್ಲ’ ಎಂದು ಹೇಳಿ ಕಡಿಮೆ ಬೆಲೆಗೆ ತಂದು ಅಂಗಡಿಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ತಾಲ್ಲೂಕಿನ ಬಡೇನಹಳ್ಳಿ ಗ್ರಾಮದ ಮಂಜುನಾಥ್ ಪದವೀಧರನಾಗಿದ್ದು, ಪಾಳು ಬಿದ್ದ ತನ್ನ ಭೂಮಿಯಲ್ಲಿ ಸಾಲ ಮಾಡಿ ಚೆಂಡು ಹೂ ಬೆಳೆದಿದ್ದಾರೆ. ಕೊರೊನಾ ಪರಿಣಾಮ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಿಲ್ಲದೆ ನಷ್ಟ ಅನುಭವಿಸಿದ್ದಾರೆ.
ಬಾಳೆಗೊನೆ ಉಚಿತ: ಹೇರೂರು ಗ್ರಾಮದ ವಿಜಯ್ ಕುಮಾರ್ ತಮ್ಮ ತೋಟದಲ್ಲಿ ಬೆಳೆದಿದ್ದ ಸುಮಾರು 100 ಬಾಳೆಗೊನೆಗಳನ್ನು ಮಾರಾಟ ಮಾಡಲು ಆಗದ ಕಾರಣ ಸಾರ್ವಜನಿಕರಿಗೆ ಉಚಿತವಾಗಿ ಹಂಚಿದರು.
ಕಲ್ಲಂಗಡಿ ವಿತರಣೆ: ಪಟ್ಟಣದ ಕಲ್ಲಂಗಡಿ ವ್ಯಾಪಾರಿ ಸಿದ್ದರಾಜು ಅರ್ಧ ಟನ್ ಕಲ್ಲಂಗಡಿಯನ್ನು ಮಾರಾಟವಾಗದೆ ಕೊಳೆತು ಹೋಗುತ್ತವೆಂದು ಉಚಿತವಾಗಿ ನೀಡಿದರು.