ತಿಪಟೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸಂಜೆವರೆಗೂ ಯಾರೂ ಅಂತ್ಯಸಂಸ್ಕಾರ ಮಾಡದ ಕಾರಣ ಗ್ರಾಮ ಪಂಚಾಯಿತಿ ಸದಸ್ಯರೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ತಾಲ್ಲೂಕಿನ ನಾಗರಘಟ್ಟ ಗ್ರಾಮ ಪಂಚಾಯಿತಿಯ ಕೈದಾಳು ಗ್ರಾಮದಲ್ಲಿ ಸೋಂಕಿತ ಶ್ರೀನಿವಾಸ (45) ಗ್ರಾಮದ ಮುಂಭಾದಲ್ಲೇ ಶುಕ್ರವಾರ ಮೃತಪಟ್ಟಿದ್ದರು. ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿರಲಿಲ್ಲ. ಸಂಬಂಧಿಕರಿಗೆ ವಿಷಯ ತಿಳಿಸಿದರೂ ಅಂತ್ಯಸಂಸ್ಕಾರಕ್ಕೆ ಹಿಂದೇಟು ಹಾಕಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್, ವೆಂಕಟೇಶ, ಭಾಗ್ಯಮ್ಮ ಅವರೇ ಪಿಪಿಇ ಕಿಟ್ ಧರಿಸಿ, ಸೋಂಕು ಹರಡದಂತೆ ಸ್ಯಾನಿಟೈಸ್ ಮಾಡಿ ಮೃತದೇಹವನ್ನು ಗ್ರಾಮದ ಹೊರ ಭಾಗದಲ್ಲಿ ಅಂತ್ಯಸಂಸ್ಕಾರ ಮಾಡಿದರು. ಗ್ರಾಮದ ಯುವಕರ ಸಹಕರಿಸಿದರು.
‘ಕೋವಿಡ್ ಲಕ್ಷಣಗಳು ಕಂಡುಬಂದ ತಕ್ಷಣ ಕುಟುಂಬಸ್ಥರು ಚಿಕಿತ್ಸೆ ಕೊಡಿಸಬೇಕು. ಗ್ರಾಮ ಪಂಚಾಯಿತಿ ಕಾರ್ಯಪಡೆಗೆ ಮಾಹಿತಿ ನೀಡಿದರೆ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಕೊಡಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಹೇಳಿದರು.