ಹುಳಿಯಾರು: ಹೋಬಳಿಯ ಮೇಲನಹಳ್ಳಿ ವಿಘ್ನೇಶ್ವರ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ಉತ್ಸವದ ಅಂಗವಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ಮಾಡಿದ್ದಾರೆ.
ಗ್ರಾಮದಲ್ಲಿ ಸಮೀಪದಿಂದ ಭೂತಪ್ಪನಗುಡಿಗೆ ಸುಮಾರು ಒಂದು ಕಿ.ಮೀ. ದೂರವಿದೆ. ಈ ರಸ್ತೆಯ ಅಕ್ಕಪಕ್ಕ ಸುಮಾರು 100ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಹುಣಸೆ, ಹೊಂಗೆ, ಜಂಬುನೆರಳೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದಾರೆ.
ಅವುಗಳಿಗೆ ಸಂಪೂರ್ಣ ಬೇಲಿ ನಿರ್ಮಿಸಿ ರಕ್ಷಣೆಯ ಜತೆ ನೀರು ಹಾಕುವ ಹೊಣೆಯನ್ನು ಯುವಕ ಸಂಘದ 7 ಮಂದಿ ಹೊತ್ತುಕೊಂಡಿದ್ದಾರೆ. ಮುಂದಿನ ಗಣೇಶೋತ್ಸವದ ವೇಳೆಗೆ ದತ್ತು ಪಡೆದಿರುವ ಸಸಿಗಳು ಹುಲುಸಾಗಿ ಬೆಳೆದಿರುತ್ತವೋ ಅವರಿಗೆ ಸಂಘದ ವತಿಯಿಂದ ಬಹುಮಾನ ನೀಡುವ ತೀರ್ಮಾನವನ್ನು ಕೈಗೊಂಡಿದ್ದಾರೆ.
ಯುವಕರ ಸಸಿ ನೆಡುವ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಗಿದೆ.